ಮಡಿಕೇರಿ: ಬಜ್ಜಿ ವಿಚಾರಕ್ಕೆ ಹಲ್ಲೆಗೆ ಒಳಗಾಗಿ ಆಸ್ಪತ್ರೆಗೆ ಸೇರಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಕೊಪ್ಪ ಗ್ರಾಮದಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ಮಹದೇವ ನಾಯಕ(65) ಮೃತ ದುರ್ದೈವಿ. ಅದೇ ಗ್ರಾಮದ ಬಾರ್ ನಲ್ಲಿ ಡಿಸೆಂಬರ್ 6ರಂದು ಮಹದೇವ ಮೇಲೆ ಹಲ್ಲೆ ಆಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
ಕೊಪ್ಪ ಗ್ರಾಮದ ಮಹದೇವ ಡಿಸೆಂಬರ್ 6ರಂದು ಕಂಠಪೂರ್ತಿ ಕುಡಿದಿದ್ದರು. ಎಣ್ಣೆ ಹೊಡೆದ ಮಹದೇವ ಅವರಿಗೆ ಬಾಯಿ ಚಪ್ಪರಿಸುವುದಕ್ಕೆ ಏನಾದರೂ ಬೇಕು ಅನಿಸಿತ್ತು. ಹೀಗಾಗಿ ಬಾರ್ ಎದುರಿಗಿದ್ದ ಕ್ಯಾಂಟಿನ್ಗೆ ಹೋಗಿ ಮೆಣಸಿನಕಾಯಿ ಬಜ್ಜಿ ಕೇಳಿದ್ದಾರೆ. ಹಣ ಇಲ್ಲದೆ ಮೆಣಸಿನಕಾಯಿ ಬಜ್ಜಿ ಕೊಡುವುದಿಲ್ಲ ಅಂತ ಅಂಗಡಿ ಮಾಲೀಕರು ಹೇಳಿದ್ದಕ್ಕೆ ಜಗಳಮಾಡಿಕೊಂಡಿದ್ದರು.
ಮಹದೇವ ಜಗಳ ಆರಂಭಿಸುತ್ತಿದ್ದಂತೆ ಸ್ಥಳಕ್ಕೆ ಬಂದ ಇಬ್ಬರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಜ್ಜಿ ಅಂಗಡಿಯ ಮಹಿಳೆಯ ಸ್ಟೀಲ್ ಜಗ್ನಿಂದ ಮಹದೇವಗೆ ಹೊಡೆದರೆ, ಉಳಿದ ಕೆಲವರು ಎದೆಗೆ ಗುದ್ದಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸಂತೋಷ್ ಮತ್ತು ಶಿವಕುಮಾರ್ ಪಕ್ಕಕ್ಕೆ ಎಳೆದೊಯ್ದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಮಹದೇವ ಅವರನ್ನು ಆಟೋದಲ್ಲಿ ಮನೆಗೆ ಕಳಿಸಿದ್ದಾರೆ. ತಕ್ಷಣವೇ ಕುಟುಂಬಸ್ಥರು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹದೇವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬೈಲುಕುಪ್ಪೆ ಪೊಲೀಸರು ಆರೋಪಿಗಳಾದ ಶಿವಕುಮಾರ್ ಮತ್ತು ಸಂತೋಷನನ್ನು ಬಂಧಿಸಿದ್ದಾರೆ.