ಮೈಸೂರು: ಟೋಲ್ ವಸೂಲಾತಿ ಖಂಡಿಸಿ ರೈತರು ಹಾಗೂ ರೈತ ಸಂಘಟನೆಗಳು ಸಿಡಿದೆದ್ದಿದ್ದು, ಟೋಲ್ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಸರ್ವ ಸಂಘಟನೆ ಒಕ್ಕೂಟಗಳಿಂದ ಜಿಲ್ಲೆಯ ಟಿ.ನರಸೀಪುರದ ಯಡತೊರೆ ಬಳಿ ಇರುವ ಟೋಲ್ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು. ಮುತ್ತಿಗೆ ಹಾಕಿದ ನಂತರ ಟೋಲ್ ರಸ್ತೆಯಲ್ಲೇ ಕುಳಿತು ಪ್ರತಿಭಟನಾಕರರು ಊಟ ಮಾಡಿದರು. ಮೈಸೂರು-ನರಸೀಪುರ ರಸ್ತೆ ಮಧ್ಯೆ ಯಾವುದೇ ಸರ್ವೀಸ್ ರಸ್ತೆ ಇಲ್ಲ. ಮೂಲಭೂತ ಸೌಕರ್ಯಗಳೂ ಇಲ್ಲ. ಟೋಲ್ ಸಂಗ್ರಹಣೆ ಮಾಡಲು ಯೋಗ್ಯವಲ್ಲದ ರಸ್ತೆಯಲ್ಲಿ ಟೋಲ್ ಸಂಗ್ರಹಣೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಟೋಲ್ ಸಂಗ್ರಹಣೆ ಮಾಡುತ್ತಿರುವುದರಿಂದ ಸ್ಥಳೀಯರಿಗೆ ಅನಾನುಕೂಲವಾಗುತ್ತಿದೆ. ಟೋಲ್ ಸಿಬ್ಬಂದಿ ಸಾರ್ವಜನಿಕರ ಮೇಲೆ ಗೂಂಡಾ ವರ್ತನೆ ತೋರುತ್ತಿದ್ದಾರೆ. ಹೀಗಾಗಿ ಕೂಡಲೇ ಟೋಲ್ ಸಂಗ್ರಹಣೆ ಮಾಡುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆ ಹಿನ್ನಲೆಯಲ್ಲಿ ಮೈಸೂರು-ನರಸೀಪುರ ಸಂಚಾರ ಅಸ್ತವ್ಯಸ್ತವಾಗಿತ್ತು.