ಮೈಸೂರು: ಪೌರತ್ವ ಕಾಯ್ದೆ ವಿಚಾರದಲ್ಲಿ ಉಂಟಾಗಿರುವ ಹಿಂಸಾಚಾರ ಕುರಿತಂತೆ ಇಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಸುದ್ದಿಗೋಷ್ಠಿ ನಡೆಸಿದರು.
ಈ ವೇಳೆ ಅವರು ಮಂಗಳೂರಿನಲ್ಲಿ ನಡೆದ ಹಿಂಸಾಚಾರಕ್ಕೆ ಮಾಜಿ ಸಚಿವ ಯು.ಟಿ. ಖಾದರ್ ನೀಡಿದ ಪ್ರಚೋದನಕಾರಿ ಹೇಳಿಕೆ ಕಾರಣ ಎಂದು ಆರೋಪಿಸಿದರು. ಅಲ್ಲದೆ ಕಾಂಗ್ರೆಸ್ ರಾಜ್ಯದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣ ಮಾಡುತ್ತಿದೆ. ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿಯಾಗುತ್ತಿದೆ. ಇದಕ್ಕೆ ರಾಜ್ಯ ಕಾಂಗ್ರೆಸ್ ನೇರ ಕಾರಣ ಎಂದರು.
ಯು.ಟಿ ಖಾದರ್ ನೀಡಿದ ಪ್ರಚೋದನಕಾರಿ ಹೇಳಿಕೆಯೇ ಇಬ್ಬರ ಸಾವಿಗೆ ಕಾರಣವಾಗಿದೆ. ಕಾಂಗ್ರೆಸ್ ಯು.ಟಿ ಖಾದರನ್ನ ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಆಗ್ರಹಿಸಿದರು. ಮೈಸೂರಿನಲ್ಲಿ ಗಲಭೆ ಸೃಷ್ಟಿಸಲು ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ತುಳಿತಕ್ಕೊಳಗಾದವರಿಗೆ ಆಶ್ರಯ ಕೊಡುವಂತದ್ದು ಸಿ.ಎ.ಎ ಉದ್ದೇಶವಾಗಿದೆ. ಪರಂಪರೆಯಲ್ಲಿ ಏನು ನಡೆದುಕೊಂಡು ಬಂದಿದೆ ಅದನ್ನೇ ಮೋದಿ ಮಾಡಿದ್ದಾರೆ. ಹೊಸದಾಗಿ ಮೋದಿ ಏನನ್ನೂ ಮಾಡಿಲ್ಲ ಎಂದ ಅವರು, ಯು.ಟಿ ಖಾದರ್ ಪ್ರಕಾರ ಅಲ್ಲಿ ತುಳಿತಕ್ಕೊಳಗಾದವರಿಗೆ ಇಲ್ಲಿ ಆಶ್ರಯ ನೀಡಬಾರದಾ?, ನೀಡ ಬಾರದು ಎಂದರೆ ಅದನ್ನ ನೇರವಾಗಿ ಹೇಳಲಿ ಎಂದರು.
ಈ ಕಾಯ್ದೆಯಿಂದ ಯಾವುದೇ ತೊಂದರೆ ಇಲ್ಲ. ಇತಿಹಾಸದಲ್ಲಿ ಕಾಂಗ್ರೆಸ್ ಮಾಡಿರುವ ದ್ರೋಹವನ್ನು ಮುಚ್ವಿಕೊಳ್ಳಲು ಅಮಾಯಕ ಮುಸ್ಲಿಮರನ್ನ ಬಲಿಕೊಡುತ್ತಿದ್ದಾರೆ. ಮೋದಿ ಸರ್ಕಾರವಾಗಲಿ, ಯಡಿಯೂರಪ್ಪ ಸರ್ಕಾರವಾಗಲಿ ಮುಸ್ಲಿಮರ ವಿರೋಧಿಯಲ್ಲ ಎಂದು ತಿಳಿಸಿದರು.