ಮೈಸೂರು: ಜಿಲ್ಲೆಯ ಮಹಾನಗರ ಪಾಲಿಕೆಯ ಉಗ್ರಾಣದ ಪರಿಶೀಲನೆಗೆ ಹೋದ ನಗರಪಾಲಿಕೆ ಸದಸ್ಯರಿಗೆ ಸಿಬ್ಬಂದಿ ತಡೆ ಹಾಕಿದ್ದಾರೆ. ಏಕಾಏಕಿ ಉಗ್ರಾಣಕ್ಕೆ ಹೋದ ಪಾಲಿಕೆ ಸದಸ್ಯರುಗಳನ್ನು ಉಗ್ರಾಣ ಸಿಬ್ಬಂದಿ ಪ್ರಶ್ನೆ ಮಾಡಿದ್ದಾರೆ.
ಸದಸ್ಯರನ್ನು ತಡೆದ ಉಗ್ರಾಣದ ಸಿಬ್ಬಂದಿ ನಡೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. ನಗರಪಾಲಿಕೆ ಸದಸ್ಯರನ್ನು ಕಳ್ಳರ ರೀತಿ ನೋಡಿ ಅವಮಾನ ಮಾಡುತ್ತಿದ್ದಾರೆ ಎನ್ನುವ ಆರೋಪ ಕೂಡ ಕೇಳಿ ಬಂದಿದೆ. ಉಗ್ರಾಣದ ಸಿಬ್ಬಂದಿ ದೊಡ್ಡಯ್ಯ ಏರು ಧ್ವನಿಯಲ್ಲಿ ಪ್ರಶ್ನೆ ಮಾಡಿದ್ದನ್ನು ಖಂಡಿಸಿ ಉಗ್ರಾಣ ಸಿಬ್ಬಂದಿಯನ್ನು ಪಾಲಿಕೆ ಸದಸ್ಯರು ತರಾಟೆಗೆ ತೆಗೆದುಕೊಂಡರು.
ಅವಧಿ ಮುಗಿದಿರುವ ಸೊಳ್ಳೆ ಔಷದಿ, ಪೌಡರ್ ಬಳಕೆ ಮಾಡಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಉಗ್ರಾಣಕ್ಕೆ ಇಬ್ಬರು ಮಹಿಳಾ ಪಾಲಿಕೆ ಸದಸ್ಯರು ಭೇಟಿ ನೀಡಿದ್ದರು. ನಗರ ಪಾಲಿಕೆ ಸದಸ್ಯರ ಪರಿಸ್ಥಿತಿಯೇ ಹೀಗಾದರೆ ಇನ್ನೂ ಸಾಮಾನ್ಯ ಜನರ ಕಥೆ ಏನು ಎಂದು ನಗರಪಾಲಿಕೆ ಸದಸ್ಯೆ ಡಾ. ಅಶ್ವಿನಿ ಶರತ್ ಹಾಗೂ ಬೇಗಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ನಗರಪಾಲಿಕೆ ಸದಸ್ಯರನ್ನು ಅವಾಯ್ಡ್ ಮಾಡಲು ಕಾರಣ ಏನು? ಉಗ್ರಾಣದಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ಸಿಬ್ಬಂದಿಗೆ ಪ್ರಶ್ನಿಸಿದರೆ ನಗರಪಾಲಿಕೆ ಸ್ಥಾಯಿ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳ ಗಮನಕ್ಕೆ ತರದೇ ಏಕಾಏಕಿ ಸದಸ್ಯರು ಉಗ್ರಾಣಕ್ಕೆ ಭೇಟಿ ನೀಡಲು ಅವಕಾಶವಿಲ್ಲ ಎಂದು ಉಗ್ರಾಣದ ಅಧಿಕಾರಿಗಳ ಸಮಜಾಯಿಷಿ ನೀಡಿದ್ದಾರೆ.