ಮೈಸೂರು: ನಮ್ಮ ಕೈಲಿ ಆಗಲಿಲ್ಲ ಆ ಪುಣ್ಯಾತ್ಮ ಮಂಡ್ಯ ಅಭಿವೃದ್ಧಿ ಮಾಡಲಿ ಎಂದು ಹೇಳುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ನಾರಾಯಣ ಗೌಡ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಎಚ್ಡಿ ಕೋಟೆಯಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಅವರು, ಈ ಸರ್ಕಾರದಲ್ಲಿ ಮಧ್ಯಾಹ್ನಕ್ಕೊಂದು ಸಂಜೆಗೊಂದು ತೀರ್ಮಾನ ಆಗುತ್ತಿದೆ. ಮುಂದೆ ಏನಾಗಲಿದೆ ಎಂಬುದನ್ನ ಕಾದು ನೋಡೋಣ. ಯಡಿಯೂರಪ್ಪನವರು ಸರ್ಕಾರ ಹೇಗೆ ಉಳಿಸಿ ಕೊಳ್ಳಬೇಕೆಂಬುದರಲ್ಲಿ ತಜ್ಞರಿದ್ದಾರೆ. ಸರ್ಕಾರ ಬಿಳಿಸೋದು ಹಾಗೂ ಸರ್ಕಾರ ರಚಿಸೋದು ಅವರಿಗೆ ಕರಗತ ಆಗಿದೆ. ಆ ಅನುಭವದಲ್ಲಿ ಈ ಸರ್ಕಾರ ಉಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ನನಗೆ ಇದೆ ಎಂದು ಹೇಳಿದರು.
ಸರ್ಕಾರ ಎಷ್ಟು ದಿನ ಇರುತ್ತೆ ಅಂತ ಹೇಳೋಕೆ ನಾನು ಭವಿಷ್ಯಕಾರನಲ್ಲ. ಆದರೆ ಇಂದಿನ ಕಾರ್ಯಕ್ರಮಕ್ಕೆ ನನಗೆ ಯಾವುದೇ ಆಹ್ವಾನ ಬಂದಿಲ್ಲ ಹಾಗಾಗಿ ಪೂರ್ವ ನಿಯೋಜಿತ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೇನೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಬಹಳ ಕಷ್ಟ ಪಟ್ಟು, ಆಸೆ ಹೊತ್ತು ಮಂತ್ರಿಗಳಾಗಿದ್ದಾರೆ. ಅವರಿಂದ ನಾನು ಒಳ್ಳೆಯ ಆಡಳಿತ ನಿರೀಕ್ಷೆ ಮಾಡುತ್ತೇನೆ ಎಂದು ತಿಳಿಸಿದರು.
ಮಂಡ್ಯದಲ್ಲಿ ನಾರಾಯಣಗೌಡ ಅಭಿವೃದ್ಧಿ ಮಾಡಿ ತೋರಿಸಲಿ. ನಮ್ ಕೈಯಲ್ಲಂತು ಆಗಲಿಲ್ಲ ಆ ಪುಣ್ಯಾತ್ಮ ಮಾಡಲಿ. ಹೊಸ ಸಚಿವರು ಟೀಕೆ ಮಾಡುತ್ತಾರೋ ಅಭಿವೃದ್ಧಿ ಮಾಡುತ್ತಾರೋ ಕಾದು ನೋಡೋಣ. ನಮ್ಮ ಪಕ್ಷಗಳಿಂದ ಹೊರ ಹೋದ ಶಾಸಕರಿಗೆ ತೃಪ್ತಿ ಆಗಿದೆ. ಅವರು ಇದೀಗಾ ಸಂಪತ್ಭರಿತರಾಗಿದ್ದಾರೆಂದು ನೂತನ ಸಚಿವರಿಗೆ ಎಚ್ಡಿಕೆ ವ್ಯಂಗ್ಯವಾಡಿ ಶುಭಾಶಯ ಕೋರಿದ್ದಾರೆ.