ಮೈಸೂರು: ಆರ್ಎಸ್ಎಸ್, ಬಜರಂಗದಳ, ಶ್ರೀರಾಮ ಸೇನೆಯವರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಬ್ಯಾನ್ ಮಾಡುವುದಾದರೆ ಬಲಪಂಥೀಯ ಸಂಘಟನೆಗಳನ್ನು ಕೂಡ ಬ್ಯಾನ್ ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಎಸ್ಡಿಪಿಐ ಹಾಗೂ ಪಿಎಫ್ಐ ಬ್ಯಾನ್ ಮಾಡಬೇಕು ಅಂತ ರಾಜ್ಯ ಸರ್ಕಾರ ಶಿಫಾರಸು ಮಾಡಿದೆ. ಬಿಜೆಪಿಯವರದ್ದು ಇದು ದ್ವಂದ್ವ ನಿಲುವು ಎಂದ ಅವರು, ಕೇವಲ ಎಸ್ಡಿಪಿಐ ಅಥವಾ ಎಡಪಂಥೀಯ ಸಂಘಟನೆಗಳು ಮಾತ್ರ ಅಪರಾಧ ಕೃತ್ಯ ಮಾಡಿದ್ದಾವಾ?, ಬಲಪಂಥೀಯ ಸಂಘಟನೆಗಳು ಕೃತ್ಯಗಳನ್ನು ಮಾಡಿಲ್ಲವಾ?, ಬ್ಯಾನ್ ಮಾಡುವುದಾರೆ ನಿಷ್ಪಕ್ಷಪಾತವಾಗಿ ಕ್ರಮ ತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು.
ಮಂಗಳೂರು ಬಾಂಬ್ ವಿಚಾರದಲ್ಲಿ ನಿಮಗೆ ಇಷ್ಟವಿಲ್ಲದ ಹೆಸರು ಕೇಳಿಬಂದಿದೆ. ಇದರಿಂದ ನೀವುಗಳು ಸೈಲೆಂಟಾಗಿದ್ದೀರಿ. ನೀವು ಟಾರ್ಗೆಟ್ ಮಾಡುವ ಅಲ್ಪಸಂಖ್ಯಾತ ಹೆಸರು ಬಂದಿದ್ದರೆ ಸುಮ್ನೆ ಇರ್ತಿದ್ರಾ ಎಂದು ಕೂಡ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.