ಮೈಸೂರು: ಕರ್ನಾಟಕದ ಗಡಿ ಗ್ರಾಮಗಳನ್ನು ಕೇರಳ ಕಸ ಹಾಕೋ ಜಾಗ ಮಾಡಿಕೊಂಡಿದ್ಯಾ? ಕೇರಳದ ಈ ಕಾರ್ಯಕ್ಕೆ ಕರ್ನಾಟಕದವರೆ ಸಾಥ್ ನೀಡುತ್ತಿದ್ದಾರಾ? ಇಂತಹ ಪ್ರಶ್ನೆಗೆ ಹೌದು ಎನ್ನುವಂತಹ ಉತ್ತರ ಸಾಕ್ಷಿ ಸಮೇತ ಸಿಕ್ಕಿದೆ.
ಕೇರಳದ ಮೆಡಿಕಲ್ ತ್ಯಾಜ್ಯಗಳನ್ನು ಅಕ್ರಮವಾಗಿ ಲಾರಿಗಳ ಮೂಲಕ ಕರ್ನಾಟಕದ ಗಡಿ ಗ್ರಾಮಗಳಲ್ಲಿ ಸುರಿಯುತ್ತಿರುವುದು ಪತ್ತೆಯಾಗಿದೆ. ಹೀಗೆ ಕಸ ತಂದು ಸುರಿಯುತ್ತಿದ್ದ ಲಾರಿಗಳನ್ನು ಮೈಸೂರು ಜಿಲ್ಲೆಯ ನಂಜನಗೂಡು ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಂಜನಗೂಡಿನ ಅಡಕನಹಳ್ಳಿ ಹುಂಡಿ ಕೈಗಾರಿಕಾ ಪ್ರದೇಶದಲ್ಲಿ ಮೆಡಿಕಲ್ ತ್ಯಾಜ್ಯ ಸುರಿಯಲಾಗುತ್ತಿತ್ತು. ಸುಮಾರು 2 ಟನ್ನಷ್ಟು ಮೆಡಿಕಲ್ ತ್ಯಾಜ್ಯ ತಂದು ಸುರಿಯುವ ಸಂದರ್ಭದಲ್ಲಿ ರೆಡ್ ಹ್ಯಾಂಡಾಗಿ ಪೊಲೀಸರು ಹಿಡಿದು, 2 ಲಾರಿ ಹಾಗೂ ಟಿ.ನರಸೀಪುರದ ಮೂಲದ ಅಬ್ದುಲ್ ಜಾನ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಉಳಿದ ಐವರು ಆರೋಪಿಗಳು ಪರಾರಿಯಾಗಿದ್ದಾರೆ.