ಮೈಸೂರು: ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪಕರಾದ ಮೈಸೂರು ರಾಜವಂಶಸ್ಥರಿಗೆ ಸಮ್ಮೇಳನದಲ್ಲಿ ಅಗೌರವ ನೀಡಲಾಗಲಿದೆ ಎನ್ನುವ ಆರೋಪ ಕೇಳಿಬಂದಿದೆ.
ಹೌದು, ಈ ಬಾರಿಯ 83ನೇ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದಲ್ಲಿ ಮೈಸೂರು ರಾಜವಂಶದ ಮನೆತನಕ್ಕೆ ಆಹ್ವಾನವನ್ನೇ ನೀಡಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.
ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪಕರ ಊರಿನಲ್ಲೇ ಸಮ್ಮೇಳನ ನಡೆಯುತ್ತಿದ್ದರೂ, ಸಾಹಿತ್ಯ ಪರಿಷತ್ನ ಸ್ವಾಗತ ಸಮಿತಿ ರಾಜವಂಶಸ್ಥರಿಗೆ ಆಹ್ವಾನವನ್ನು ನೀಡದೇ ನಿರ್ಲಕ್ಷ್ಯವಹಿಸಿದೆ. ಮೈಸೂರು ಒಡೆಯರ್ ರಾಜಮನೆತನದ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರಿಗೂ ಸಮಿತಿ ಆಹ್ವಾನವನ್ನು ನೀಡಿಲ್ಲ.
ಈಗಲೂ ಮೈಸೂರಿನ ಸಾಹಿತ್ಯ ಪರಿಷತ್ ಮೂಲ ಕಚೇರಿ ಅರಮನೆಯ ಉತ್ತರದ್ವಾರದಲ್ಲಿದೆ. ಅರಮನೆ ಆವರಣದಲ್ಲೇ ಪರಿಷತ್ ಕಚೇರಿ ಇದ್ದರೂ ರಾಜಮನೆತನದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಸಾಹಿತ್ಯ ಸಮ್ಮೇಳನದಲ್ಲಿ ಹೆಸರಿಗಷ್ಟೇ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾಮಂಟಪ ನಿರ್ಮಾಣ ಮಾಡಿರುವ ಸಮಿತಿ ಸಂಪ್ರಾದಾಯಕ್ಕಾದರೂ ರಾಜವಂಶಸ್ಥರಿಗೆ ಆಹ್ವಾನ ನೀಡದೇ ಅಪಮಾನ ಮಾಡಿದ್ದಕ್ಕೆ ಸಾರ್ವಜನಿಕ ವಲಯದಿಂದ ಟೀಕೆ ಕೇಳಿಬಂದಿದೆ.
ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ 1915ರಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು. ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಮುಂದೆ 1938ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದ್ದರು.