ಮೈಸೂರು: ಮೃತ ಸಲೀಂ ಹೊಟ್ಟೆ ಪಾಡಿಗಾಗಿ ವಿವಿಧ ಕೆಲಸಗಳನ್ನ ಮಾಡುತ್ತಿದ್ದ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಉಸ್ತುವಾರಿ ಸಚಿವ ಮಹದೇವಪ್ಪ(HC Mahadevappa) ಹೇಳಿದ್ದಾರೆ.
ಹೀಲಿಯಂ ಸಿಲಿಂಡರ್ ಸ್ಪೋಟ ಪ್ರಕರಣಕ್ಕೆ (Helium Cylinder Blast) ಸಂಬಂಧಿಸಿದಂತೆ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೃತ ಸಲೀಂ ಮೈಸೂರಿನಲ್ಲಿ ಹೊಟ್ಟೆ ಪಾಡಿಗಾಗಿ ಐಸ್ಕ್ಯಾಂಡಿ ಜೊತೆಗೆ ಬಲೂನ್ ಮಾರುತ್ತಿದ್ದ. ಹಿಲೀಯಂ ಪೌಡರ್ ಬಳಸಿ ಗ್ಯಾಸ್ ತಯಾರಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಕ್ರಮ ವಹಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: 15 ದಿನಗಳಿಂದ ಲಾಡ್ಜ್ನಲ್ಲಿ ವಾಸ – ಮೈಸೂರು ಸ್ಫೋಟಕ್ಕೆ ಎನ್ಐಎ ಎಂಟ್ರಿ
ರಾಷ್ಟ್ರೀಯ ತನಿಖಾ ದಳ (NIA) ಘಟನೆಯ ಎಲ್ಲಾ ಮಾಹಿತಿಯನ್ನು ಪಡೆದುಕೊಂಡಿದೆ. ಇಂತಹ ಘಟನೆ ನಡೆದಾಗ ಎನ್ಐಎ ಮಾಹಿತಿ ಪಡೆಯುವುದು ಸಹಜ ಪ್ರಕ್ರಿಯೆ. ಅದರಂತೆ ಅವರು ತನಿಖೆ ಮಾಡಲಿ ನಮ್ಮದೇನು ಅಭ್ಯಂತರವಿಲ್ಲ. ಇದೊಂದು ಆಕಸ್ಮಿಕ ಘಟನೆಯಾಗಿದ್ದು ಈಗಾಗಲೇ ಎನ್ಐಎಯವರು ಸಂಪೂರ್ಣ ಮಾಹಿತಿ ಪಡೆದಿದ್ದಾರೆ ಎಂದರು.
ಗಾಯಳುಗಳಿಗೆ ಸರ್ಕಾರದಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಸರ್ಕಾರವೇ ಚಿಕಿತ್ಸಾ ವೆಚ್ಚ ಭರಿಸಲಿದೆ ಎಂದು ಹೇಳಿದರು.

