– ರಾಜ್ಯದಲ್ಲೇ ಸಂಪತ್ತಿದೆ, ಕೇಂದ್ರವನ್ನು ಬೇಡಬೇಕಿಲ್ಲ
– ನನ್ನ ಅವಧಿಯಲ್ಲಿ ಮೋದಿ ಸ್ಪಂದಿಸಿದ್ದರು
ಮೈಸೂರು: ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬೊಕ್ಕಸ ಖಾಲಿ ಎಂಬ ಬಿಎಸ್ವೈ ಪುತ್ರ ವಿಜಯೇಂದ್ರ ಹೇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ಗರಂ ಆಗಿದ್ದು, ಯಾರಪ್ಪ ಅವನು, ನಿನ್ನೆ ಮೊನ್ನೆ ಬಂದ ಅವನಿಗೆ ಏನು ಗೊತ್ತಿದೆ ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುಶಃ ವಿಜಯೇಂದ್ರನ ಬೊಕ್ಕಸ ಖಾಲಿಯಾಗಿದೆ. ಅದನ್ನು ತುಂಬಿಸಿಕೊಳ್ಳುಲು ಅವರು ಓಡಾಡುತ್ತಿದ್ದಾರೆ. ನಿನ್ನೆ ಮೊನ್ನೆ ಬಂದವನಿಗೆ ಅಷ್ಟು ಪ್ರಾಮುಖ್ಯತೆ ಕೊಡುವ ಅವಶ್ಯಕತೆ ಇಲ್ಲ. ದುಡ್ಡು ಲಪಟಾಯಿಸುವುದು ಒಂದೇ ಅವನಿಗೆ ಗೊತ್ತಿರೋದು ಎಂದು ವಾಗ್ದಾಳಿ ಮಾಡಿದರು.
ಇದೇ ವೇಳೆ ಯಡಿಯೂರಪ್ಪ ಅವರ ಬೊಕ್ಕಸ ಖಾಲಿಯಾಗಿದೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರ ಕುಟುಂಬದ ಬೊಕ್ಕಸನಾ? ಅಥವಾ ರಾಜ್ಯ ಸರ್ಕಾರದ ಬೊಕ್ಕಸನಾ ಅವರೇ ಹೇಳಬೇಕು. ನೆರೆ ಹಾವಳಿ ವಿಚಾರವಾಗಿ ಯಡಿಯೂರಪ್ಪ ಹೇಳಿಕೆ ಗಮನಿಸಿದ್ದೇನೆ. ಇದನ್ನು ನೋಡಿದರೆ ಅವರಿಗೂ ಮತ್ತು ಪ್ರಧಾನಿ ಮೋದಿ ಅವರಿಗು ಭಿನ್ನಾಭಿಪ್ರಾಯವಿದೆ ಎಂದು ಗೊತ್ತಾಗುತ್ತದೆ. ನನ್ನ ಸರ್ಕಾರದ ಅವಧಿಯಲ್ಲಿ ಮೋದಿ ಅವರ ಸರಿಯಾಗಿ ಸ್ಪಂದಿಸಿದ್ದರು ಎಂದು ಹೇಳಿದರು.
ನೆರೆ ಪರಿಹಾರ ವಿಚಾರದಲ್ಲಿ ವಿರೋಧ ಪಕ್ಷಗಳು ಬೊಬ್ಬೆ ಹೊಡೆಯುತ್ತಿವೆ. ಅದ್ದರಿಂದ ಸಿಎಂ ಮಂತ್ರಿಗಳಿಗೆ ಮತ್ತು ಶಾಸಕರಿಗೆ ಆಕ್ರೋಶದಿಂದ ಮಾತನಾಡಬೇಡಿ ಎಂದು ಹೇಳಿದ್ದಾರೆ. ಅಸಲಿಗೆ ರಾಜ್ಯದಲ್ಲಿ ಆರ್ಥಿಕವಾಗಿ ಸಮಸ್ಯೆ ಇಲ್ಲ ಎಂದು ಒಂದು ಕಡೆ ಹೇಳಿದ್ದಾರೆ. ಮತ್ತೊಮ್ಮೆ ಬೊಕ್ಕಸ ಖಾಲಿ ಇದೆ ಎಂದು ಹೇಳುತ್ತಾರೆ. ನಾನು ಸಿಎಂ ಆಗಿದ್ದವನು. ಬೊಕ್ಕಸ ಸಂಪತ್ ಭರಿತವಾಗಿದೆ. ನೆರೆ ಪರಿಹಾರದ ವಿಚಾರವಾಗಿ ಕೇಂದ್ರದ ಮುಲಾಜಿಗೆ ಒಳಗಾಗುವ ಅವಶ್ಯಕತೆ ಇಲ್ಲ. ರಾಜ್ಯ ಸರ್ಕಾರವೇ ಸಹಾಯ ಮಾಡಬಹುದಾಗಿದೆ. ಇದಕ್ಕೆ ಆರ್ಥಿಕ ತೊಂದರೆ ಇಲ್ಲ ಎಂದು ಹೇಳಿದರು.