ಮೈಸೂರು: ಇವತ್ತೇ ನನ್ನ ಅಳಿಯ ಜಾಮೀನಿನ ಮೇಲೆ ಬಿಡುಗಡೆ ಆಗುತ್ತಾರೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಮಾವ ತಿಮ್ಮಯ್ಯ ಹೇಳಿದ್ದಾರೆ.
ನಗರದ ನಿವಾಸದಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ನನ್ನ ಅಳಿಯ ಯಾವದೇ ತಪ್ಪು ಮಾಡಿಲ್ಲ. ಇದರಲ್ಲಿ ಯಾವ ಹವಾಲವೂ ಇಲ್ಲ ಅಕ್ರಮ ಸಂಪಾದನೆಯೂ ಇಲ್ಲ. ಬುಧವಾರವೇ ನನ್ನ ಅಳಿಯ ಜಾಮೀನಿನ ಮೇಲೆ ಬಿಡುಗಡೆ ಆಗುತ್ತಾರೆ. ಅಳಿಯನ ಬಂಧನ ಸುದ್ದಿ ಕೇಳಿದ ಕೂಡಲೇ ಮಗಳ ಜೊತೆ ಮಾತನಾಡಿದ್ದೇನೆ. ನಾವೂ ಯಾರು ಆತಂಕಕ್ಕೆ ಒಳಗಾಗಿಲ್ಲ ಎಂದು ಹೇಳಿದ್ದಾರೆ.
ತಪ್ಪು ಮಾಡಿಲ್ಲ ಎಂದ ಮೇಲೆ ಆತಂಕ ಯಾಕೆ ಹೇಳಿ? ರಾಜಕೀಯ ದುರುದ್ದೇಶದಿಂದ ಡಿ.ಕೆ.ಶಿವಕುಮಾರ್ ಅವರನ್ನು ಬಂಧನವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯವರು ಅಧಿಕಾರದಲ್ಲಿದ್ದಾರೆ. ಹೀಗಾಗಿ ಅಧಿಕಾರ ದುರಪಯೋಗ ಪಡಿಸಿಕೊಂಡು ಬಂಧನ ಮಾಡಲಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಜಾರಿ ನಿರ್ದೇಶನಾಲಯವು ಡಿ.ಕೆ.ಶಿವಕುಮಾರ್ ಅವರನ್ನು ನಾಲ್ಕು ದಿನ ವಿಚಾರಣೆ ಮಾಡಿದೆ. ಎಲ್ಲ ರೀತಿಯಲ್ಲೂ ಅವರು ವಿಚಾರಣೆಗೆ ಸಹಕಾರ ನೀಡಿದ್ದಾರೆ. ಈಗ ವಿಚಾರಣೆಗೆ ಸಹಕರಿಸುತ್ತಿಲ್ಲ ಅಂದರೆ ಅದರ ಅರ್ಥ ಏನೂ? ವಿಚಾರಣೆ ನಾಲ್ಕು ದಿನ ನಡೆದ ಕಾರಣ ಬಂಧನವಾಗಲ್ಲ ಎಂದು ಕೊಂಡಿದ್ದೇವು. ಆದರೆ ಈಗ ಬಂಧನವಾಗಿದೆ. ಇದನ್ನು ಕಾನೂನಾತ್ಮಕವಾಗಿ ಎದುರಿಸುವ ಶಕ್ತಿ ನನ್ನ ಅಳಿಯನಿಗೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.