ಬೆಂಗಳೂರು: ದಸರಾ ವಿಶೇಷ ಸಂಚಿಕೆಯಾಗಿ ಪಬ್ಲಿಕ್ ಟಿವಿಯಲ್ಲಿ ಸಿನಿ ದಿಗ್ಗಜರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಇಬ್ಬರ ಮಾತಿನ ಸಮಾಗಮಕ್ಕೆ ಪಬ್ಲಿಕ್ ಟಿವಿ ವೇದಿಕೆಯಾಗಿತ್ತು. ಇಬ್ಬರೂ ದೊಡ್ಡ ನಟರಾಗಿ ಇಂದು ಸಿನಿ ಅಭಿಮಾನಿಗಳನ್ನು ರಂಜಿಸುತ್ತಿದ್ದು, ದಸರಾ ಅಂಗವಾಗಿ ಇಬ್ಬರ ಹಳೆಯ ನೆನಪಿನ ಬುತ್ತಿಯನ್ನು ತೆರೆದಿಟ್ಟರು.
90 ದಶಕದಲ್ಲಿ ಎಲ್ಲರ ಮನೆಯಲ್ಲೂ ದೇವರಿಗೆ ಪೂಜೆ ಮಾಡಿ ಭರ್ಜರಿ ಊಟ ನೀಡುತ್ತಿದ್ದರು, ಮೈಸೂರಿನ ಪ್ರಕಾಶ್ ಹೋಟೆಲ್ ಬಳಿಯ ವಠಾರದಲ್ಲಿ ನಮ್ಮ ಮನೆ ಇತ್ತು. ಆ ವೇಳೆ ದಸರಾ ನೋಡಲು ಮೊದಲು ಸ್ಥಳ ಕಾಯ್ದಿರಿಸಲು ಬೆಳಗ್ಗೆಯೇ ಮಕ್ಕಳು ತೆರಳುತ್ತಿದ್ದರು. ಆದರೆ ಇಂದು ತಂತ್ರಜ್ಞಾನದ ಫಲವಾಗಿ ಇವೆಲ್ಲ ಸುಲಭವಾಗಿದೆ. ಗರುಡಗಂಬ ಆರಂಭವಾದಾಗ ದಸರಾ ಆರಂಭವಾಗುತ್ತಿದೆ ಎಂದು ನಮಗೆ ಗೊತ್ತಾಗುತಿತ್ತು. ಆದರೆ ಇಂದು ದಸರಾ ನೀಡುವ ವೇಳೆ ಆ ನಿರಂತರತೆ ಮಿಸ್ ಆಗುತ್ತಿದೆ. ಪ್ರತಿವರ್ಷ ಮೈಸೂರು ದಸರಾಗೆ ಹಾಜರಾಗುತ್ತೇನೆ. ಅಂದು ದಸರಾ ಮೆರವಣಿಗೆ ನಡೆದ ಬಳಿಕ ಜಂಬೂ ಸವಾರಿ ಬಿಟ್ಟು ಮಿಕ್ಕ ಎಲ್ಲವೂ ವಾಪಸ್ ಮೆರವಣಿಗೆಯಲ್ಲೇ ಬರುತ್ತಿತ್ತು. ಅದು ರಾತ್ರಿ 1 ಗಂಟೆಯವರೆಗೂ ಸಾಗುತ್ತಿತ್ತು. ರಾತ್ರಿಯಾದರೂ ಅದನ್ನು ನೋಡಲು ನಾವು ತಪ್ಪದೇ ಹಾಜರು ಹಾಕುತ್ತಿದ್ದೇವು ಎಂದು ದರ್ಶನ್ ಹಳೆ ನೆನಪು ಮೆಲಕು ಹಾಕಿದರು.
ನಟ ಯಶ್ ಅವರು ದಸರಾ ಕುಸ್ತಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ದರ್ಶನ್, ಕುಸ್ತಿಯಲ್ಲಿ ದೇಹದ ತೂಕಕ್ಕೆ ತಕ್ಕಂತೆ ಸ್ಪರ್ಧೆ ನಡೆಯುತ್ತದೆ. ಈ ವೇಳೆ ಕುಸ್ತಿ ಜಟ್ಟಿಗಳ ತೂಕ ಒಂದು ಗ್ರಾಂ ಹೆಚ್ಚಾದರೂ ಅವರು ಆ ತೂಕ ಕಡಿಮೆ ಮಾಡಿಕೊಳ್ಳಲು ಧರಿಸಿದ್ದ ಚಡ್ಡಿ ಬಿಚ್ಚಿ ನಿಲ್ಲುತ್ತಿದ್ದರು. ಆ ದೃಶ್ಯ ಈಗಲೂ ನೆನಪಿದೆ. ಆದರೆ ಸದ್ಯ ಅಂದಿನಂತೆ ಈಗ ಒಬ್ಬನೇ ಭೇಟಿ ನೀಡಿ ದಸರಾ ನೋಡುವ ಅವಕಾಶ ಕೈತಪ್ಪಿದೆ. ಅದ್ದರಿಂದ ಒಬ್ಬನೇ ಬೈಕಿನಲ್ಲಿ ಹೆಲ್ಮೆಟ್ ಧರಿಸಿ ಬನ್ನಿ ಮಂಟಪದವರೆಗೂ ಹೋಗುತ್ತೇನೆ ಎಂದು ತಮ್ಮ ದಸರಾ ಭೇಟಿಯ ಹಿಂದಿನ ರಹಸ್ಯ ಬಿಚ್ಚಿಟ್ಟರು.
ಯಶ್, ದರ್ಶನ್ ಬೈಕ್ ರೈಡ್: ಈ ವೇಳೆ ಮೈಸೂರು ಭೇಟಿ ಆಸೆ ತೆರೆದಿಟ್ಟ ನಟ ಯಶ್ ಹಾಗೂ ದರ್ಶನ್ ಅವರು ಮುಂದಿನ ದಿನಗಳಲ್ಲಿ ರೈಡ್ ಮಾಡುವ ಕುರಿತು ತಿಳಿಸಿದಸರು. ಇದೇ ವೇಳೆ ಯಶ್ ಸಿನಿಮಾಗಳಿಗೆ ಶುಭಕೋರಿದ ಅವರು ದರ್ಶನ್ ಅವರು ಮುಂದಿನ ಚಿತ್ರಗಳು ಯಶಸ್ವಿಯಾಗಲಿ, ಆ ನವದುರ್ಗೆಯರ ಆರ್ಶೀವಾದ ಅವರಿಗೆ ಇರಲಿ ಎಂದು ಶುಭ ಕೋರಿದರು.
ತಮ್ಮ ಆರೋಗ್ಯ ಕುರಿತ ಪ್ರಶ್ನೆಗೆ ಉತ್ತರಿಸಿದ ದರ್ಶನ್, 10 ದಿನಗಳಲ್ಲಿ ಮತ್ತೆ ನಾನು ಚಿತ್ರೀಕರಣದಲ್ಲಿ ಭಾಗವಹಿಸುತ್ತೇನೆ ಎಂದರು. ಈ ವೇಳೆ ಯಶ್ ಅವರು ಮೈಸೂರು ಚಿತ್ರ ಮಂದಿರದಲ್ಲಿ ದರ್ಶನ್ ಸಿನಿಮಾ ನೋಡಿದ ನೆನಪು ಮಾಡಿ ತಮ್ಮ ಹಿಂದಿನ ಹಾದಿಯನ್ನ ಬಿಚ್ಚಿಟ್ಟರು. ಬಳಿಕ ದರ್ಶನ್ ಅಭಿಮಾನಿಗಳಿಗೆ ಯಶ್ ಅವರು ಬೇಗ ಸಿಹಿ ಸುದ್ದಿ ನೀಡಲಿ ಶುಭವಾಗಲಿ ಎಂದರು.
ನಮ್ಮೂರ ಹುಡುಗ: ದರ್ಶನ್ ಅವರ ಜೀವನ ನನಗೆ ಆರಂಭದಿಂದಲೂ ಸ್ಫೂರ್ತಿಯಾಗಿತ್ತು. ಏಕೆಂದರೆ ನಾನು ಸಿನಿಮಾ ನೋಡಲು ಆರಂಭಿಸಿದ ವೇಳೆ ದರ್ಶನ್ ಅವರು ದೊಡ್ಡ ಸ್ಟಾರ್. ನಮ್ಮೂರಿನವರಾದ ಕಾರಣ ಅಭಿಮಾನ ಮತ್ತಷ್ಟು ಜಾಸ್ತಿ. ಅವರ ಸಿನಿಮಾದಲ್ಲಿ ಮೈಸೂರು ಶೈಲಿಯ ನ್ಯಾಚುರಲ್ ಮಾತು ನನಗೆ ಇಷ್ಟ. ಅಲ್ಲದೇ ಅವರು ದೇಹದ ದಂಡನೆ ಮಾಡಿರುವ ರೀತಿಯೂ ಅದ್ಭುತ. ದರ್ಶನ್ ಅವರು ಬೆಳೆದ ಪ್ರತಿ ಹಂತವನ್ನು ನಾನು ಸಂಪೂರ್ಣವಾಗಿ ನೋಡಿದ್ದೇನೆ. ಅವರ ಪ್ರತಿ ಹಂತದ ಬೆಳವಣಿಗೆಯಲ್ಲೂ ನನಗೆ ಖುಷಿ ಆಗುತ್ತಿತ್ತು. ಪುನೀತ್ ರಾಜ್ಕುಮಾರ್, ಉಪೇಂದ್ರ ಅವರು ನನಗೆ ಸಿನಿಮಾಗೆ ಬರಲು ಸ್ಫೂರ್ತಿಯಾದರು ಎಂದು ದರ್ಶನ್ ಅವರ ಬಗ್ಗೆ ತಮ್ಮ ಮನಸ್ಸಿನ ಮಾತನ್ನು ಹಂಚಿಕೊಂಡರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv