– 223 ಮಂದಿಯ ಸ್ಯಾಂಪಲ್ ಪರೀಕ್ಷೆ
ಮೈಸೂರು: ಜಿಲ್ಲೆಯ ಜ್ಯೂಬಿಲಿಯೆಂಟ್ ಕಾರ್ಖಾನೆ ನೌಕರ ಪೇಶೆಂಟ್ ನಂಬರ್ 52 ಮಾಡಿರುವ ಅವಾಂತರದಿಂದ ಇಡೀ ಮೈಸೂರು ಕೊರೊನಾ ಡೇಂಜರ್ ಝೋನ್ಗೆ ತಲುಪುವಂತೆ ಮಾಡುತ್ತಿದೆ.
ಇವರೆಗೆ ಈತನಿಂದ ಸೋಂಕು ಅಂಟಿಸಿಕೊಂಡವರ ಸಂಖ್ಯೆ ಬರೋಬ್ಬರಿ 18 ಆಗಿದೆ. ಈತನೂ ಸೇರಿ ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆ ಆಗಿದೆ. ಇದರಲ್ಲಿ ಆತನ ಪತ್ನಿ ಮತ್ತು ಮಾವ ಕೂಡ ಇದ್ದಾರೆ. ಇನ್ನುಳಿದಂತೆ ಇಬ್ಬರು ವಿದೇಶದಿಂದ ಬಂದವರು. ಅಲ್ಲಿಗೆ ಮೈಸೂರಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ 21 ಆಗಿದೆ. ಈ ಸಂಖ್ಯೆ ಇಲ್ಲಿಗೆ ನಿಲ್ಲುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಈ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆ ಇದೆ.
ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಶಂಕರ್ ಕೊರೊನಾ ಪಾಸಿಟಿವ್ ಸಂಖ್ಯೆ ದುಪ್ಪಟಾಗುವ ಸೂಚನೆ ನೀಡಿದ್ದಾರೆ. ಸೋಂಕಿತರ ಸಂಪರ್ಕ ವ್ಯಕ್ತಿಗಳ ಸ್ಯಾಂಪಲ್ ಪರೀಕ್ಷೆ ಮಾಡಲೇಬೇಕು. ಸದ್ಯ ಪ್ರೈಮರಿ ಸಂಪರ್ಕ ಹೊಂದಿದ್ದ 223 ಜನರ ಸ್ಯಾಂಪಲ್ ಪರೀಕ್ಷೆ ನಡೆಯಬೇಕಿದೆ. ನಂಜನಗೂಡಿನ 19 ಕೇಸ್ ಪ್ರೈಮರಿ ಸಂಪರ್ಕದ ಹುಡುಕಾಟವು ಮುಂದುವರಿದಿದೆ. ಸಂಪರ್ಕಿತರ ಸಂಖ್ಯೆ ನೂರು ಆಗಬಹುದು. ಸಾವಿರವೂ ಆಗಬಹುದು ಎಂದು ಹೇಳುವ ಮೂಲಕ ಮೈಸೂರಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುವ ಸೂಚನೆ ರವಾನಿಸಿದ್ದಾರೆ.
ಪೇಶೆಂಟ್ ನಂಬರ್ 52ಗೆ ಸೋಂಕು ಹೇಗೆ ತಗುಲಿತು ಎಂಬುದು ಇನ್ನೂ ಸ್ಪಷ್ಟವಾಗುತ್ತಿಲ್ಲ. ಈ ನಡುವೆ ಮಾಜಿ ಸಿದ್ದರಾಮಯ್ಯ ಜಿಲ್ಲಾಧಿಕಾರಿಯವರನ್ನ ಭೇಟಿ ಮಾಡಿದ್ದರು. ಬಳಿಕ ಮಾತನಾಡಿ ಜ್ಯೂಬಿಲಿಯೆಂಟ್ ಕಾರ್ಖಾನೆ ಕಾರ್ಮಿಕನಿಗೆ ಸೋಂಕು ತಗುಲೋಕೆ ಚೈನಾ ಕಂಟೈನರ್ ಕಾರಣವಿರಬಹುದು. ಜಿಲ್ಲಾಧಿಕಾರಿಗಳು ನನಗೆ ಮಾಹಿತಿ ನೀಡಿದ್ದು, ಚೈನಾದಿಂದ ಬಂದ ಒಂದು ಕಂಟೈನರ್ ರಿಂದ ಸೋಂಕು ತಗುಲಿರಬಹುದು ಎಂದಿದ್ದಾರೆ.
ಜ್ಯೂಬಿಲಿಯೆಂಟ್ ಕಾರ್ಖಾನೆ ನೌಕರನಿಂದ ಸೃಷ್ಟಿಯಾದ ಕೊರೊನಾ ಸೋಂಕಿನ ಚೈನ್ ಲಿಂಕ್ ಬಹು ದೊಡ್ಡದಾಗುತ್ತಿದೆ. ಇದರ ಜೊತೆಗೆ ನಿಜಾಮುದ್ದಿನ್ ಮಸೀದಿ ಸಭೆಗೆ ಹೋದವರು ಈ ಚೈನ್ ಲಿಂಕ್ಗೆ ಸೇರುವ ಲಕ್ಷಣಗಳಿವೆ. ಇದು ಬಹು ದೊಡ್ಡ ಆತಂಕದ ವಿಚಾರ.