ಮೈಸೂರು: ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಹನಿಮೂನ್ಗೂ ಕೊರೊನಾ ಬಿಸಿ ತಟ್ಟುತ್ತಿದೆ. ಹನಿಮೂನ್ ಮುಗಿಸಿ ಮೈಸೂರಿಗೆ ಆಗಮಿಸುವ ನವದಂಪತಿಗಳಿಗೆ ಕಡ್ಡಾಯ ತಪಾಸಣೆಗೆ ಒಳಪಡಿಸುವಂತೆ ಜಿಲ್ಲಾಧಿಕಾರಿ ಕಚೇರಿಗೆ ನ್ಯಾಷನಲ್ ಸ್ಟೂಡೆಂಟ್ಸ್ ಯುನಿಯನ್ ಆಫ್ ಇಂಡಿಯಾದ ಅಧ್ಯಕ್ಷ ರಫೀಕ್ ಅಲಿ ಮನವಿ ಸಲ್ಲಿಸಿದ್ದಾರೆ.
ಮೈಸೂರಿನಲ್ಲಿ ಈವರೆಗೆ ಯಾವುದೇ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆ ನಂತರ ಯೂರೋಪ್ಗೆ ಹನಿಮೂನ್ ಹೋಗಿದ್ದಾರೆ. ಹನಿಮೂನ್ ಮುಗಿಸಿ ಮೈಸೂರಿಗೆ ಆಗಮಿಸುವ ಸಂದರ್ಭದಲ್ಲಿ ಸೆಲೆಬ್ರಿಟಿಗಳು ಎಂಬ ಕಾರಣದಿಂದ ಅವರನ್ನು ತಪಾಸಣೆ ಮಾಡದೇ ನಿರ್ಲಕ್ಷ್ಯಿಸಬಾರದು. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಎಂದು ಮನವಿ ಮಾಡಲಾಗಿದೆ.
ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಅವರನ್ನು ತಪಾಸಣೆಗೆ ಒಳಪಡಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಚಂದನ್ ಶೆಟ್ಟಿ – ನಿವೇದಿತಾ ಗೌಡ ಮದುವೆ ನಂತರ ಯೂರೋಪ್ಗೆ ಪ್ರವಾಸ ಕೈಗೊಂಡಿದ್ದಾರೆ. ಯೂರೋಪ್ನ ಇಟಲಿಯಲ್ಲಿ ಈಗಾಗಲೇ ಶೇ.30 ರಷ್ಟು ಭಾಗ ಕೊರೊನಾ ಆವರಿಸಿದೆ. ಇದುವರೆಗೂ ಇಟಲಿಯಲ್ಲಿ 12,462 ಕೊರೊನಾ ಪಾಸಿಟಿವ್ ಕೇಸ್ಗಳು ಬೆಳಕಿಗೆ ಬಂದಿದ್ದು, 827 ಜನ ಮೃತಪಟ್ಟಿದ್ದಾರೆ.