ಮೈಸೂರು: ಬಿಜೆಪಿ ಮುಖಂಡ ಆನಂದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯ ಬಳಿಕ ಆರೋಪಿ ಬಸವರಾಜ್ ಹೆಣದ ಪಕ್ಕ ಡ್ಯಾನ್ಸ್ ಮಾಡಿದ್ದಾನೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಕೊಲೆ ಪ್ರಕರಣ ಸಂಬಂಧ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಮೈಸೂರಿನ ಜನತಾನಗರದ ನಿವಾಸಿ ಬಸವರಾಜು ಬಂಧಿತ ಆರೋಪಿ. ವೈಯಕ್ತಿಕ ದ್ವೇಷದಿಂದ ಬಿಜೆಪಿ ಮುಖಂಡ ಆನಂದ್ನನ್ನು ಬಸವರಾಜ್ ಕೊಲೆ ಮಾಡಿದ್ದಾನೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.
ತನ್ನನ್ನು ಬೆಳೆಯಲು ಆನಂದ್ ಬಿಡುತ್ತಿಲ್ಲ ಎಂಬ ಕಾರಣಕ್ಕೆ ಬಸವರಾಜ್ ಇತ್ತೀಚೆಗೆ ತಾನೇ ಆನಂದ್ ಜೊತೆ ಜಗಳವಾಡಿದ್ದ. ಕಳೆದ ನಾಲ್ಕೈದು ದಿನಗಳ ಹಿಂದೆ ಸ್ನೇಹಿತರ ಎದುರು ಬಸವರಾಜು ಮೇಲೆ ಆನಂದ್ ಹಲ್ಲೆ ಮಾಡಿದ್ದ. ಇದೇ ದ್ವೇಷದ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಆನಂದ್ ಬರ್ತ್ ಡೇ ಪಾರ್ಟಿಯ ಗುಂಗಿನಲ್ಲಿದ್ದಾಗಲ್ಲೇ ಸ್ಕೆಚ್ ಹಾಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಬಸವರಾಜ್ ಹೆಣದ ಪಕ್ಕ ಡ್ಯಾನ್ಸ್ ಮಾಡಿದ್ದಾನೆ. ಇದನ್ನೂ ಓದಿ: ಜೊತೆಗೆ ಅಪಾರ್ಟ್ಮೆಂಟಿಗೆ ಬಂದ ಸ್ನೇಹಿತರಿಂದ್ಲೇ ಬಿಜೆಪಿ ಮುಖಂಡ ಕೊಲೆ
ಬಿಯರ್ ಬಾಟಲಿಯಲ್ಲಿದ್ದ ರಕ್ತವನ್ನು ಕೋಣೆಯಲ್ಲೆಲ್ಲಾ ಚೆಲ್ಲಾಡಿ ವಿಕೃತಿ ಮೆರೆದಿದ್ದಾನೆ. ಕೊಲೆ ನಡೆದಾಗ ಸ್ಥಳದಲ್ಲಿದ್ದ ಸುರೇಶ್, ಗಿರಿ, ಮಂಜು ಎಂಬವರು ಪರಾರಿಯಾಗಿದ್ದಾರೆ. ಘಟನೆಗೂ ಮುನ್ನ ಸ್ಥಳದಲ್ಲಿದ್ದ ಪರಮೇಶ್ ಹಾಗೂ ಕೃಷ್ಣ ಎಂಬವರನ್ನೂ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಬಿಯರ್ ಬಾಟಲಿನಿಂದ ಚುಚ್ಚಿ ಬಿಜೆಪಿ ಮುಖಂಡನ ಬರ್ಬರ ಕೊಲೆ