– ಬರ್ತ್ ಡೇ ದಿನವೇ ಪಾರ್ಟಿಯಲ್ಲಿ ಹೆಣವಾದ ರೌಡಿ ಶೀಟರ್
– ಕೊಲೆಗೈದ ಸ್ನೇಹಿತರು ಪರಾರಿ
ಮೈಸೂರು: ಬಿಯರ್ ಬಾಟಲಿನಿಂದ ಚುಚ್ಚಿ ಹುಟ್ಟುಹಬ್ಬದ ದಿನವೇ ಬಿಜೆಪಿ ಮುಖಂಡನನ್ನು ಆತನ ಸ್ನೇಹಿತರೇ ಕೊಲೆ ಮಾಡಿರುವ ಘಟನೆ ಮೈಸೂರಿನ ಕುವೆಂಪುನಗರದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಬಿಜೆಪಿಯ ಮೈಸೂರು ನಗರ ಸ್ಲಂ ಮೋರ್ಚಾ ಉಪಾಧ್ಯಕ್ಷ ಆನಂದ್ ಎಂದು ಗುರುತಿಸಲಾಗಿದೆ. ಗುರುವಾರ ಆನಂದ್ ಹುಟ್ಟುಹಬ್ಬವಿದ್ದು, ಕುವೆಂಪು ನಗರದ ಲವಕುಶ ಪಾರ್ಕ್ ಬಳಿಯ ಸರ್ವಿಸ್ ಅಪಾರ್ಟ್ಮೆಂಟ್ನಲ್ಲಿ ರೂಮ್ ಮಾಡಿಕೊಂಡು ಪಾರ್ಟಿ ಮಾಡುತ್ತಿದ್ದಾಗ ಸ್ನೇಹಿತರಿಂದಲೇ ಭೀಕರವಾಗಿ ಹತ್ಯೆಯಾಗಿದ್ದಾನೆ.
ಉತ್ತನಹಳ್ಳಿ ಸಮೀಪ ಖಾಸಗಿ ಕಲ್ಯಾಣ ಮಂಟಪದಲ್ಲಿ ಪಾರ್ಟಿ ಮುಗಿಸಿ ಬಂದಿದ್ದ ಆನಂದ್, ನಂತರ ವಾಪಸ್ ಬಂದು ಸರ್ವಿಸ್ ಅಪಾರ್ಟ್ಮೆಂಟ್ ನಲ್ಲಿ ರೂಮ್ ಫಿಕ್ಸ್ ಮಾಡಿ ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿದ್ದ. ಪಾರ್ಟಿ ನಡೆಯುವಾಗಲೇ ಸ್ನೇಹಿತರೊಂದಿಗೆ ಮಾತಿನ ಚಕಮಕಿಯಾಗಿದೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಬಿಯರ್ ಬಾಟಲಿಯಿಂದ ಸ್ನೇಹಿತರೇ ಆನಂದನಿಗೆ ಚುಚ್ಚಿ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಕೊಲೆ ಮಾಡಿದ್ದ ಆನಂದ್
ಬಿಜೆಪಿ ಮುಖಂಡ ರಾಜೀವ್ ಬೆಂಬಲಿಗನಾಗಿದ್ದ ಆನಂದ್, ರಿಯಲ್ ಎಸ್ಟೇಟ್ ಹಾಗೂ ಫೈನಾನ್ಸ್ ನಡೆಸುತ್ತಿದ್ದ. ಕಳೆದ 13 ವರ್ಷಗಳ ಹಿಂದೆ ಜನತಾನಗರದ ಮಾರುತಿ ಟೆಂಟ್ ರಸ್ತೆಯಲ್ಲಿ ಕುಮಾರಸ್ವಾಮಿ ಎಂಬಾತನನ್ನು ಮರ್ಡರ್ ಮಾಡಿದ್ದ. ನಂತರ ಜೈಲು ಶಿಕ್ಷೆ ಅನುಭವಿಸಿ ವಾಪಸ್ ಆಗಿದ್ದ. ಆತನ ಮೇಲೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಓಪನ್ ಮಾಡಲಾಗಿತ್ತು. ಆದ್ದರಿಂದ ಹಳೇ ವೈಷಮ್ಯದ ಮೇಲೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕುವೆಂಪುನಗರ ಪೊಲೀಸರು, ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಜೊತೆಗೆ ಓರ್ವ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.