ಮೈಸೂರು: ದಕ್ಷ ಪೊಲೀಸ್ ಅಧಿಕಾರಿ ಎಂದು ಹೆಸರಾದ ಮೂಲತಃ ಮೈಸೂರ ಜಿಲ್ಲೆಯವರಾದ ಸದ್ಯ ಕಲಬುರಗಿ ಪೊಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಹಿರಿಯ ಐಪಿಎಸ್ ಅಧಿಕಾರಿ ಡಿಐಜಿ ಪುಟ್ಟಮಾದಯ್ಯ ಎಂ ಸೇರಿದಂತೆ ಐವರಿಗೆ ಭಾರತದ 77ನೇ ಗಣರಾಜ್ಯೋತ್ಸವದ ಅಂಗವಾಗಿ ಕೇಂದ್ರ ಸರ್ಕಾರವು 2026ನೇ ಸಾಲಿನ ಪೊಲೀಸ್ ಉತ್ಕೃಷ್ಟ ಸೇವಾ ಪದಕವನ್ನು ಘೋಷಿಸಿದೆ.
ಅಸಾಧಾರಣ ಧೈರ್ಯ, ವಿಶಿಷ್ಟ ಹಾಗೂ ನಿಷ್ಠಾವಂತ ಸೇವೆ, ದೀರ್ಘಕಾಲದ ಶ್ರೇಷ್ಠ ಕಾರ್ಯನಿರ್ವಹಣೆ ಮತ್ತು ಸಾರ್ವಜನಿಕ ಸೇವೆಗೆ ಸಲ್ಲಿಸಿದ ಮಹತ್ವದ ಕೊಡುಗೆಯನ್ನು ಗುರುತಿಸಿದ್ದರಿಂದ ಹಿರಿಯ ಐಪಿಎಸ್ ಅಧಿಕಾರಿ ಪುಟ್ಟಮಾದಯ್ಯ ಅವರಿಗೆ ರಾಷ್ಟçಪತಿ ಪದಕ ಪುರಸ್ಕಾರ ಲಭಿಸಿದೆ. ಈ ಗೌರವವನ್ನು ರಾಷ್ಟ್ರಪತಿಯವರಿಂದ ನೀಡಲಾಗುವ ಪೊಲೀಸ್ ಶ್ರೇಣಿಯ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಇದನ್ನೂ ಓದಿ: 70 ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಶೌರ್ಯ ಪ್ರಶಸ್ತಿ ಘೋಷಣೆ
ಈ ಹಿಂದೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್ಪಿ) ಅವರು ಸೇವೆ ಸಲ್ಲಿಸಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ, ಅಪರಾಧ ನಿಯಂತ್ರಣ, ಸಾರ್ವಜನಿಕರೊಂದಿಗೆ ಸ್ನೇಹಪೂರ್ಣ ಪೊಲೀಸ್ ವ್ಯವಸ್ಥೆ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸಿದ್ದರು. ಅವರ ಸೇವಾ ಅವಧಿಯಲ್ಲಿ ಜಿಲ್ಲೆಯಲ್ಲಿನ ಹಲವು ಸವಾಲಿನ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿದ್ದರು.
ಪೊಲೀಸ್ ಇಲಾಖೆಯಲ್ಲಿ ತಮ್ಮ ಕಾರ್ಯಕ್ಷಮತೆ, ಶಿಸ್ತು, ಮಾನವೀಯ ನಿಲುವು ಹಾಗೂ ಜನಪರ ಸೇವೆಯಿಂದ ಗುರುತಿಸಿಕೊಂಡಿದ್ದ ಪುಟ್ಟಮಾದಯ್ಯ ಎಂ ಅವರು ಸದ್ಯ ಡಿ.ಐ.ಜಿ ಹುದ್ದೆಯಲ್ಲಿ ಕಲಬುರಗಿ ಪೊಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದು, ಹೊಸ ತಲೆಮಾರಿನ ಪೊಲೀಸ್ ಅಧಿಕಾರಿಗಳಿಗೆ ಶಿಸ್ತು, ಸೇವಾಭಾವನೆ ಮತ್ತು ವೃತ್ತಿಪರ ನೈಪುಣ್ಯ ಬೆಳೆಸುವಲ್ಲಿ ಮಾರ್ಗದರ್ಶನ ನೀಡುತ್ತಿದ್ದಾರೆ.
ಮೈಸೂರು ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐಪಿಎಸ್ ಅಧಿಕಾರಿಗಳಾದ ಸವಿತಾ.ಎಸ್, ಬೆಳಗಾವಿಯ ಡಾ.ಚೇತನ್ ಸಿಂಗ್ ರಾಥೋರ್ ಹಾಗೂ ಮಂಗಳೂರಿನ ಅಮಿತ್ ಸಿಂಗ್ ಅವರಿಗೂ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಘೋಷಣೆಯಾಗಿದೆ. ಇದನ್ನೂ ಓದಿ: Padma Awards 2026: ರೋಹಿತ್ ಶರ್ಮಾ, ಹರ್ಮನ್ಪ್ರೀತ್ ಕೌರ್ಗೆ ಪದ್ಮಶ್ರೀ ಪ್ರಶಸ್ತಿ

