ಮೈಸೂರು: ದೇವಸ್ಥಾನದ ಮುಂದೆ ಭಿಕ್ಷೆ ಬೇಡುವ ವಯೋವೃದ್ಧ ಭಿಕ್ಷುಕಿ ಅದೇ ದೇವಸ್ಥಾನದಲ್ಲಿನ ದೇವರಿಗೆ 2.30 ಲಕ್ಷ ರೂ. ಹಣವನ್ನು ಕಾಣಿಕೆಯಾಗಿ ಕೊಟ್ಟಿದ್ದಾರೆ.
ಮೈಸೂರಿನ ಪಡುವಾರಹಳ್ಳಿಯಲ್ಲಿನ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ಎಂ.ವಿ. ಸೀತಾ ಎಂಬವರು ಹಲವು ವರ್ಷದಿಂದ ಭಿಕ್ಷೆ ಬೇಡುತ್ತಿದ್ದು, ಹಾಗೇ ಭಿಕ್ಷೆ ಬೇಡಿ ಸಂಪಾದಿಸಿದ 2.30 ಲಕ್ಷ ಹಣವನ್ನು ಅದೇ ದೇವಸ್ಥಾನದ ಅಭಿವೃದ್ಧಿಗೆ ಹಾಗೂ ಹನುಮ ಜಯಂತಿ ದಿನ ಅನ್ನಸಂತರ್ಪಣೆಗಾಗಿ ಕಾಣಿಕೆಯಾಗಿ ನೀಡಿ ಅಚ್ಚರಿ ಮೂಡಿಸಿದ್ದಾರೆ.
ತನ್ನವರೂ ಅಂತಾ ಯಾರು ಇಲ್ಲದ ಸೀತಮ್ಮ ದೇವಸ್ಥಾನದ ಸಮೀಪದ ಮನೆಯೊಂದರಲ್ಲಿ ಮಲಗುತ್ತಾರೆ. ದಿನವೂ ಭಿಕ್ಷೆ ಬೇಡಿ ಅದರಲ್ಲಿ ಸಿಕ್ಕ ಹಣವನ್ನು ವಾರಕೊಮ್ಮೆ ತನ್ನ ಬ್ಯಾಂಕ್ ಅಕೌಂಟ್ ಗೆ ಹಾಕುತ್ತಿದ್ದರು. ಈಗ ತಮ್ಮ ಅಕೌಂಟ್ ನಲ್ಲಿದ್ದ ಎಲ್ಲಾ ಹಣವನ್ನು ಯಾವ ದೇವರ ಮುಂದೆ ಕೂತು ಭಿಕ್ಷೆ ಬೇಡಿ ಸಂಪಾದಿಸಿದ್ದರೋ ಅದೇ ದೇವರಿಗೆ ಕಾಣಿಕೆಯಾಗಿ ನೀಡಿದ್ದಾರೆ.
ಮೊದಲು ಮನೆ ಕೆಲಸ ಮಾಡುತ್ತಿದ್ದೆ. ನಂತರ ಭಿಕ್ಷೆ ಬೇಡಿ ಹಣವನ್ನು ಸಂಗ್ರಹಿಸಲು ಆರಂಭಿಸಿದೆ. ದೇವರು ನನಗೆ ಉಸಿರು ಬದುಕು ಕೊಟ್ಟಿದ್ದಾನೆ. ಅವನಿಂದ ಪಡೆದಿದ್ದನ್ನು ಅವನಿಗೆ ವಾಪಸ್ ಕೊಡುತ್ತಿದ್ದೇನೆ. ನನಗೆ ಇದರಲ್ಲಿ ತೃಪ್ತಿ ಇದೆ ಎಂದು ಸೀತಮ್ಮ ಹೇಳಿದ್ದಾರೆ.
ಮೂಲತಃ ಮದ್ರಾಸ್ ಮೂಲದ ಅವರು ತಮ್ಮ ಪೋಷಕರದ ವೀರ ರಾಘವಮೂರ್ತಿ ಹಾಗೂ ಉನ್ನವೇಲಮ್ಮ ರವರ 12 ಮಕ್ಕಳ ಪೈಕಿ ಎಂಟನೆಯವರು. ಮೈಸೂರಿನ ರಾಜಮನೆತನದಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ ಇವರ ತಂದೆ ವೀರರಾಘವಮೂರ್ತಿ ಸುಮಾರು 1930 ರಲ್ಲಿ ಕುಟುಂಬ ಸಮೇತ ಮದ್ರಾಸ್ ಗೆ ಹಿಂತಿರುಗಿದ್ದರು. ಮದ್ರಾಸ್ ಗೆ ಹಿಂತಿರುಗುವ ವೇಳೆ ಸೀತಮ್ಮ ರನ್ನು ಮೈಸೂರಿನಲ್ಲೇ ಬಿಟ್ಟು ಹೋಗಿದ್ದಾರೆ. ಬಾಲ್ಯದಲ್ಲೇ ಹೆತ್ತವರಿಂದ ದೂರವಾದ ಸೀತಮ್ಮ ಅವರಿವರ ಮನೆಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸಿದ್ದರು. ಕೈಯಲ್ಲಿ ಶಕ್ತಿ ಇರುವ ವರೆಗೂ ದುಡಿದು ತಿಂದ ಸೀತಮ್ಮ ವೃದ್ಧಾಪ್ಯ ಸಮೀಪಿಸಿದಾಗ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಕುಳಿತು ಹತ್ತಾರು ವರ್ಷಗಳಿಂದ ಭಿಕ್ಷೆ ಬೇಡುತ್ತಿದ್ದಾರೆ.
https://www.youtube.com/watch?v=XPd_L8-OBJE