ತಿರುವನಂತಪುರಂ: ಕೇರಳದ ಕಡಕ್ಕಾವೂರ್ನಲ್ಲಿ ಮಹಿಳಾ ವಿಮಾ ಏಜೆಂಟ್ ನಿಗೂಢ ಸಾವು ಪ್ರಕರಣಕ್ಕೆ ತಿರುವು ಸಿಕ್ಕಿದೆ. ಆಕೆ ತನ್ನ ಸ್ನೇಹಿತನಿಂದಲೇ ಕೊಲೆಯಾಗಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ಜೆಸ್ಸಿ (54) ಕೊಲೆಯಾದ ಮಹಿಳೆ. ಹತ್ತು ದಿನಗಳ ಹಿಂದೆ ಈ ಮಹಿಳೆ ಮೃತದೇಹವು ರೈಲು ಹಳಿಗಳ ಮೇಲೆ ಪತ್ತೆಯಾಗಿತ್ತು. ಸೂಕ್ತ ಸಾಕ್ಷ್ಯಾಧಾರ ಸಿಗದ ಕಾರಣ ಆರಂಭದಲ್ಲಿ ಪೊಲೀಸರು ಇದನ್ನು ಆತ್ಮಹತ್ಯೆ ಪ್ರಕರಣ ಎಂದು ಪರಿಗಣಿಸಿದ್ದರು. ಆದರೆ ಮೃತಳ ಸಂಬಂಧಿಕರು ಆಕೆ ಧರಿಸಿದ್ದ ಚಿನ್ನಾಭರಣಗಳು ನಾಪತ್ತೆಯಾಗಿರುವ ವಿಚಾರವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ಈ ಕುರಿತು ತನಿಖೆ ಆರಂಭಿಸಿದ ಪೊಲೀಸರು ಕೊನೆಗೂ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಹಗಲು ಹೊತ್ತಿನಲ್ಲೇ ಬ್ಯಾಂಕ್ ದರೋಡೆ – ಸಿಬ್ಬಂದಿ ಹತ್ಯೆ
ವಿಧವೆಯಾಗಿದ್ದ ಜೆಸ್ಸಿಯೊಂದಿಗೆ ಆಕೆಯ ಸ್ನೇಹಿತ ಕಡಕ್ಕಾವೂರು ಸಮೀಪದ ಭಜನಮಾಡಂ ನಿವಾಸಿ ಮೋಹನನ್ ಸಂಬಂಧ ಹೊಂದಿದ್ದ. ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಲು ಮೋಹನನ್, ಜೆಸ್ಸಿಯಿಂದ ಹಣಕಾಸಿನ ನೆರವು ಕೋರಿದ್ದ. ಆದರೆ ಜೆಸ್ಸಿ ಅವನ ಮನವಿಯನ್ನು ನಿರಾಕರಿಸಿದ್ದಳು. ಇದಾದ ಬಳಿಕ ಆರೋಪಿಯು ಸೀರೆಯಿಂದ ಜೆಸ್ಸಿ ಕತ್ತು ಹಿಸುಕಿ ಕೊಲೆ ಮಾಡಿ ಆಭರಣಗಳನ್ನು ದೋಚಿದ್ದಾನೆ. ಆರೋಪಿಯು ಮಹಿಳೆಯನ್ನು ಕೊಲೆ ಮಾಡಿ, ಶವವನ್ನು ರೈಲು ಹಳಿ ಮೇಲೆ ಹಾಕಿದ್ದ ಎಂದು ವಿಚಾರಣೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಯಾರಿಗೆ ಬೇಕು?: ಹೆಚ್.ಡಿ.ದೇವೇಗೌಡ