– ನಾವು ಹುಟ್ಟಿದಾಗಿನಿಂದಲೂ ಅನ್ನ ತಿನ್ನುತ್ತಿದ್ದೇವೆ, ಸಗಣಿ ತಿಂತಿಲ್ಲ
ಮೈಸೂರು: ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ ಹಾಗಾಗಿದೆ ಜೆಡಿಎಸ್ ಕಥೆ ಎಂದು ದಳ ನಾಯಕರ ಪಾದಯಾತ್ರೆ ಬಗ್ಗೆ ಮಾಜಿ ಡಿಸಿಎಂ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ನ ದಂಡನಾಯಕ ದೇವೇಗೌಡರೇ ಸೋತಿದ್ದಾರೆ. ಇದ್ದರಿಂದ ಜೆಡಿಎಸ್ ಪಕ್ಷ ದಿಕ್ಕು ದೆಸೆ ಇಲ್ಲದಂತಾಗಿದೆ. ದೇವೇಗೌಡರಿಗೆ ವಯಸ್ಸಾಗಿದೆ. ಅವರು ಮುಂದೆ ಚುನಾವಣೆಗೆ ಸ್ಪರ್ಧೆ ಮಾಡಲ್ಲ, ಮಾಡಲ್ಲ ಅಂತಾರೆ. ಆದರೆ ಅವರು ಸ್ಪರ್ಧೆ ಮಾಡುತ್ತಾರೆ ಎಂದರು.
ಮಧ್ಯಂತರ ಚುನಾವಣೆ ಬಂದರೆ ಯಾವುದೇ ಕಾರಣಕ್ಕೂ ಬಿಜೆಪಿಯಿಂದ ಬರಲ್ಲ. ನಿತ್ಯವೂ ನಾವು ಅವರಿಗೆ ಟಾಂಗ್ ಕೋಡೋ ಬದಲು ಸುಮ್ಮನಿದ್ದರೆ ಮೈತ್ರಿ ಸರ್ಕಾರವೇ, ಸರ್ಕಾರವನ್ನು ಫಿನಿಶ್ ಮಾಡಿ ಬಿಡಲಿದೆ. ಈ ಸರ್ಕಾರ ಬದುಕಿದೆಯೋ ಸತ್ತಿದ್ಯೋ ಎಂದು ಡಾಕ್ಟರ್ ಬಿಪಿ ಚೆಕ್ ಮಾಡುವಂತಾಗಿದೆ. ಇವರ ಆಡಳಿತ 1 ವರ್ಷದಿಂದ ಇರುತ್ತೋ ಹೋಗುತ್ತೋ ಎನ್ನುವ ರೀತಿ ಇದೆ. ಮಧ್ಯಂತರ ಚುನಾವಣೆ ಬರುವುದಾದರೆ ಜೆಡಿಎಸ್- ಕಾಂಗ್ರೆಸ್ ಜಗಳದಿಂದ ಬರುತ್ತದೆ ಎಂದರು.
ಈ ಸರ್ಕಾರ ಬೇಕಿರೋದು ಕೇವಲ ಮೂರು ಜನಕ್ಕೆ ಮಾತ್ರ. ಡಿಕೆ ಶಿವಕುಮಾರ್, ಕುಮಾರಸ್ವಾಮಿ ಹಾಗೂ ಪರಮೇಶ್ವರ್ಗೆ ಮಾತ್ರ ಈ ಸರ್ಕಾರ ಬೇಕಾಗಿದೆ. ಕಾಂಗ್ರೆಸ್ಗೂ ಬೇಕಿಲ್ಲ, ಜೆಡಿಎಸ್ಗೂ ಈ ಮೈತ್ರಿ ಬೇಕಿಲ್ಲ. ಕೇವಲ ಅಧಿಕಾರದ ಆಸೆಗೆ ಇವರು ಅಂಟಿಕೊಂಡಿದ್ದಾರೆ. ಕರ್ನಾಟಕದ ಜನ ಕಾಂಗ್ರೆಸ್ಗೆ ಒಂದು ನಾಮ, ಜೆಡಿಎಸ್ಗೊಂದು ನಾಮ ಹಾಕಿದ್ದಾರೆ. ಹೀಗೆ ನಾಮ ಹಾಕಿದ ಮೇಲೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕಿತ್ತು ಎಂದು ಕಿಡಿಕಾರಿದರು.
ಕೇವಲ ಅಧಿಕಾರಕ್ಕಾಗಿ ಸ್ವಾರ್ಥ ಸಾಧನೆಗಾಗಿ ಸರ್ಕಾರ ನಡೆಸುತ್ತಿದ್ದಾರೆ. ಆದರೆ ಇರುವಷ್ಟು ದಿನ ಅಧಿಕಾರದಲ್ಲಿ ಇದ್ದು ಆಡಳಿತ ನಡೆಸುತ್ತಿದ್ದಾರೆ. ಸರ್ಕಾರ ಮಾಡೋ ಯೋಗ್ಯತೆ ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಿ. ನಾವು ಸರ್ಕಾರವನ್ನು ಮಾಡುತ್ತಿವಿ ಎಂದು ಮೈತ್ರಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
ನನ್ನ ಅನ್ನ ತಿಂತಿದೀರ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಅದನ್ನು ಅವರ ಮನೆಯಿಂದ ತಂದು ಕೊಡ್ತಿದ್ದಾರಾ.? ಅವರ ಮನೆ ದುಡ್ಡು ಕೊಟ್ಟು, ರೋಡ್ ಮಾಡಿದರೆ, ಹಾಲು ಕೊಟ್ಟಿದ್ದರೆ, ಅಕ್ಕಿ ಕೊಟ್ಟಿದರೆ ಲೆಕ್ಕ ಬರಲಿ. ಸ್ವಾಮಿ ಈ ಪ್ರಪಂಚ ಹುಟ್ಟಿದಾಗಿನಿಂದಲೂ ನಾವು ಅನ್ನ ತಿನ್ನುತ್ತಿದ್ದೇವೆ, ಸಗಣಿ ತಿಂತಿಲ್ಲ. ತೆರಿಗೆ ಹಣದಿಂದ ಎಲ್ಲಾ ನಡಿತಿರೋದು. ಯಾರು ತಮ್ಮ ಮನೆಯಿಂದ ತಂದು ಕೊಡಲ್ಲ ಎಂದು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.