ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ವಿಜಯದಶಮಿಯಂದು ನಡೆಯುವ ಜಂಬೂಸವಾರಿ ಮೆರವಣಿಗೆ ನೋಡಲು ದೇಶ-ವಿದೇಶದಿಂದ ಪ್ರವಾಸಿಗರು ಬಂದು ತುದಿಗಾಲಲ್ಲಿ ನಿಂತಿದ್ದಾರೆ. ಅದ್ಧೂರಿ ದಸರಾ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ.
ಮಧ್ಯಾಹ್ನ 2.30 ರಿಂದ 3.16 ರೊಳಗೆ ಅರಮನೆ ಉತ್ತರ ದ್ವಾರವಾದ ಬಲರಾಮ ದ್ವಾರದಲ್ಲಿ ನಂದಿ ಪೂಜೆ ಮಾಡಿ ಬಳಿಕ ಮಧ್ಯಾಹ್ನ 3.40 ರಿಂದ 4.10 ರೊಳಗೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.
ಜಂಬೂ ಸವಾರಿಯಲ್ಲಿ ಸತತ 5ನೇ ಬಾರಿಗೆ ಅರ್ಜುನ 750 ಕೆಜಿ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿರುವ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ರಾಜ ಗಾಂಭೀರ್ಯದಲ್ಲಿ ಸಾಗಲಿದ್ದಾನೆ. ಅರ್ಜುನನಿಗೆ ಕಾವೇರಿ ಮತ್ತು ವರಲಕ್ಷ್ಮಿ ಆನೆಗಳು ಸಾಥ್ ನೀಡಲಿವೆ. ನಿಶಾನೆ ಮತ್ತು ನೌಪತ್ ಆನೆಗಳಾಗಿ ಅಭಿಮನ್ಯು, ಬಲರಾಮ, ಕ್ರಮ, ದ್ರೋಣ, ಕಾವೇರಿ, ವಿಜಯ, ಚೈತ್ರ, ಗೋಪಿ ಪ್ರಶಾಂತ, ನಂಜಯ ಆಣೆಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿವೆ. ಜಂಬೂ ಸವಾರಿಗೂ ಮೊದಲು ವಜ್ರಮುಷ್ಠಿ ಜಟ್ಟಿ ಕಾಳಗ ನಡೆಯಲಿದೆ.
ದಸರಾ ಮೆರವಣಿಗೆಯಲ್ಲಿ ಏನೆಲ್ಲಾ ಇರಲಿದೆ?
* 42 ಸ್ತಬ್ಧ ಚಿತ್ರಗಳು, 40 ವಿವಿಧ ಜಾನಪದ ಕಲಾತಂಡಗಳು
* 10 ವಿಶೇಷ ಕಲಾ ತಂಡ, ಉತ್ತರ ಭಾರತದ ವಿವಿಧ ರಾಜ್ಯಗಳ 5 ಕಲಾ ತಂಡ
* 1, 675 ಕಲಾವಿದರು ಸೇರಿದಂತೆ ಜಂಬೂಸವಾರಿಯಲ್ಲಿ ಒಟ್ಟು 2 ಸಾವಿರ ಮಂದಿ ಭಾಗಿಯಾಗಲಿದ್ದಾರೆ.
ಜಂಬೂಸವಾರಿಗೆ ನಗರದ ಎಲ್ಲೆಡೆ ಖಾಕಿ ಕಣ್ಣು:
* ಅರಮನೆ ಹಾಗೂ ಜಂಬೂ ಸವಾರಿ ಮೆರವಣಿಗೆ 70 ಮಂದಿ ಕಮಾಂಡೋಗಳ ನಿಯೋಜನೆ
* ಜಂಬೂಸವಾರಿ ಮೆರವಣಿಗೆ ಮಾರ್ಗದಲ್ಲಿ 86 ಸಿಸಿ ಕ್ಯಾಮೆರಾ ಅಳವಡಿಕೆ
* 11 ಎಸ್ಪಿ, ಡಿಸಿಪಿ, 43 ಎಸಿಪಿ, 131 ಪೊಲೀಸ್ ಇನ್ಸ್ ಪೆಕ್ಟರ್
* 328 ಸಬ್ ಇನ್ಸ್ ಪೆಕ್ಟರ್, 521 ಸಹಾಯಕ ಸಬ್ ಇನ್ಸ್ ಪೆಕ್ಟರ್
* 304 ಮಹಿಳಾ ಪೊಲೀಸರು, 1600 ಹೋಂ ಗಾರ್ಡ್
* 3944 ಮಂದಿ ಪೊಲೀಸ್ ಪೇದೆಗಳ ನಿಯೋಜನೆ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv