– ತನಿಖೆಯ ವೇಳೆ ಸ್ಫೋಟಕ ಮಾಹಿತಿ ಬಹಿರಂಗ
– ಮೈಸೂರಿನಲ್ಲಿ ಗಣ್ಯ ವಕ್ತಿಗಳ ಹತ್ಯೆಗೆ ಸಂಚು
ಮೈಸೂರು: ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆಗೆ ಮುಂದಾಗುವ ಮುನ್ನ ಆರೋಪಿ ನಾಯಿ ಕತ್ತು ಕತ್ತರಿಸಿ ಕತ್ತು ಸೀಳುವ ಅಭ್ಯಾಸ ಮಾಡಿದ್ದ ಎಂಬ ಸ್ಫೋಟಕ ಮಾಹಿತಿ ತನಿಖೆ ವೇಳೆ ಹೊರಬಿದ್ದಿದೆ.
ಭಾನುವಾರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತನ್ವೀರ್ ಸೇಠ್ ಅವರ ಕುತ್ತಿಗೆ ಚಾಕು ಹಾಕಿ ಹಲ್ಲೆ ಮಾಡಲಾಗಿತ್ತು. ಈ ವಿಚಾರವಾಗಿ ಆರೋಪಿಯನ್ನು ಬಂಧಿಸಿ ತನಿಖೆ ಮಾಡುತ್ತಿರುವ ಪೊಲೀಸರಿಗೆ ದಿನ ದಿನ ಸ್ಫೋಟಕ ಮಾಹಿತಿ ಲಭ್ಯವಾಗುತ್ತಿದೆ.
ಈ ಹಿಂದೆ ಬಾಲಿವುಡ್ ಸಿನಿಮಾ ನೋಡಿ ತನ್ವೀರ್ ಅವರ ಹಲ್ಲೆ ಮಾಡಿದ್ದ ಎಂದು ಫರಾನ್ ಸ್ನೇಹಿತರು ಹೇಳಿದ್ದರು. ಈಗ ತನ್ವೀರ್ ಕತ್ತು ಕುಯ್ಯುವ ಮುನ್ನ ಇಡೀ ತಂಡವೇ ತರಬೇತಿ ಪಡೆದಿತ್ತು. ನಾಯಿಗಳ ಕತ್ತು ಕತ್ತರಿಸಿ ಅಭ್ಯಾಸ ಮಾಡುತ್ತಿದ್ದರು ಎಂಬ ವಿಚಾರ ತಿಳಿದು ಬಂದಿದೆ. ನಾಯಿ ಕುತ್ತಿಗೆ ಭಾಗ ಮನುಷ್ಯನ ಕುತ್ತಿಗೆಗಿಂತ ಗಟ್ಟಿಯಾಗಿದೆ. ಇದೆ ಕಾರಣದಿಂದ ನಾಯಿಗಳ ಕುತ್ತಿಗೆ ಕತ್ತರಿಸಿ ತನ್ವೀರ್ ಕೊಲೆಗೆ ಸಜ್ಜಾಗಿದ್ದ ತಂಡ, ಅಂತಿಮವಾಗಿ ಫರಾನ್ ಅನ್ನು ಕಳುಹಿಸಿ ತನ್ವೀರ್ ಕುತ್ತಿಗೆಗೆ ಚಾಕು ಹಾಕಿಸಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನು ಓದಿ: ತನ್ವೀರ್ ಸೇಠ್ ಹತ್ಯೆ ಯತ್ನಕ್ಕೆ ಬಾಲಿವುಡ್ ಸಿನಿಮಾ ಪ್ರೇರಣೆ
ಫ್ಲಾನ್ ವಿಫಲವಾಗಿತ್ತು:
ಇನ್ನೊಂದು ಸತ್ಯವನ್ನು ಫರಾನ್ ಬಾಯಿಬಿಟ್ಟಿದ್ದು, ಟಿಪ್ಪು ಜಯಂತಿ ವಿಚಾರವನ್ನು ದುರ್ಬಳಕೆ ಮಾಡಿಕೊಳ್ಳಲು ತಂಡ ಮುಂದಾಗಿತ್ತು. ಟಿಪ್ಪು ಜಯಂತಿ ಆಚರಣೆ ವಿಚಾರವಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಆವರಣದಲ್ಲಿ ಪ್ರತಿಭಟನೆ ನಡೆಸಿದ್ದ ತನ್ವೀರ್ ಸೇಠ್ ಅವರನ್ನು ಆ ದಿನವೇ ಮುಗಿಸಲು ಫರಾನ್ ಸಂಚು ರೂಪಿಸಿದ್ದ. ಆದರೆ ಅಂದು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದ ತನ್ವೀರ್ ಸೇಠ್ ಯಾವುದೇ ಗಲಾಟೆಗೆ ಅವಕಾಶ ನೀಡದ ಕಾರಣ ಈ ಪ್ಲಾನ್ ವಿಫಲವಾಗಿತ್ತು.
ಫರಾನ್ ಮತ್ತು ತಂಡ ಟಿಪ್ಪು ಜಯಂತಿಯಂದೇ ತನ್ವೀರ್ ಸೇಠ್ ಅವರನ್ನು ಕೊಲೆ ಮಾಡಲು ಸ್ಕೆಚ್ ಹಾಕಿತ್ತು. ಮುಡಾ ಆವರಣದಲ್ಲಿ ಪ್ರತಿಭಟನೆ ವೇಳೆ ಉದ್ದೇಶ ಪೂರ್ವಕವಾಗಿ ಗಲಾಟೆ ನಡೆಸುವುದು. ಗಲಾಟೆ ವೇಳೆ ತನ್ವೀರ್ ಸೇಠ್ ಅವರನ್ನು ಕೊಲೆ ಮಾಡುವುದು. ಈ ಗಲಾಟೆ ವೇಳೆ ಯಾರೋ ಅವರನ್ನು ಕೊಲೆ ಮಾಡಿದ್ದಾರೆ ಎಂದು ಬಿಂಬಿಸಲು ತೀರ್ಮಾನ ಮಾಡಲಾಗಿತ್ತು. ಆದರೆ ತನ್ವೀರ್ ಸೇಠ್ ಪ್ರತಿಭಟನೆ ಕೈ ಬಿಟ್ಟು ಕಾನೂನು ಹೋರಾಟದ ಮೊರೆ ಹೋಗಿದ್ದರಿಂದ ನಮ್ಮ ಪ್ಲಾನ್ ವಿಫಲವಾಯ್ತು ಎಂದು ಆರೋಪಿ ಒಪ್ಪಿಕೊಂಡಿದ್ದಾನೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನು ಓದಿ: ‘ಗಣ್ಯರನ್ನು ಕೊಲೆ ಮಾಡಿ ಫೇಮಸ್ ಆಗ್ತೀನಿ’ – ಸ್ನೇಹಿತರ ಬಳಿ ಕೊಚ್ಚಿಕೊಂಡಿದ್ದ ಫರಾನ್
ಕೊಲೆಗೆ ತಂಡ ರಚನೆ:
ಮೈಸೂರಲ್ಲಿ ಮಹಾ ಮರ್ಡರ್ ಮಾಡಲು ಬಿಗ್ ಸ್ಕೆಚ್ ಹಾಕಲಾಗಿದೆ. ರಾಜಕಾರಣಿಗಳು, ಧರ್ಮಗುರುಗಳು, ಗಣ್ಯವ್ಯಕ್ತಿಗಳೇ ಟಾರ್ಗೆಟ್ ಆಗಿದೆ. 30 ತಂಡಗಳು ಸಕ್ರಿಯವಾಗಿ ಕೆಲಸಮಾಡುತ್ತಿವೆ. ಒಂದು ತಂಡದಲ್ಲಿ 15 ಜನರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ಹಂತದಲ್ಲಿ ಪ್ರಮುಖ ವ್ಯಕ್ತಿಗಳ ಚಲನವಲನ ಅದರ ಪರಿಣಾಮಗಳನ್ನ ಸಂಘಟನೆ ಮುಖಂಡರಿಗೆ ಸದಸ್ಯರು ತಿಳಿಸುತ್ತಿದ್ದರು.
ತನ್ವೀರ್ ಹತ್ಯೆ ಯತ್ನ ಪ್ರಕರಣವೂ ಇದೇ ರೀತಿ ವಾಚ್ ಮಾಡಿಯೇ ಮಾಡಲಾಗಿತ್ತು. ರಾಜಕೀಯವಾಗಿ ಬೇರೆ ರೀತಿ ಮುಗಿಸಲು ಸಾಧ್ಯವಾಗದಿದ್ದಾಗ ಕೊಲೆ ಯತ್ನ ಮಾಡಲಾಗಿದೆ. ರಾಜು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಬೀದ್ ಪಾಷಾ ತನ್ವೀರ್ ಕೊಲೆ ಯತ್ನ ಪ್ರಕರಣದ ಮಾಸ್ಟರ್ ಮೈಂಡ್ ಎಂಬುದು ತನಿಖೆಯಿಂದ ಖಚಿತವಾಗಿದೆ. ಈಗಾಗಲೇ ಪ್ರಕರಣದ 5 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನಡೆದಿದ್ದೇನು?
ಭಾನುವಾರ ರಾತ್ರಿ ಮೈಸೂರಿನ ತನ್ವೀರ್ ಸೇಠ್ ಬನ್ನಿ ಮಂಟಪ ಸಮೀಪದ ಪಾರ್ಟಿ ಹಾಲಿಗೆ ತಮ್ಮ ಆತ್ಮೀಯ ಮಗನ ಮದುವೆಯ ಬೀಗರೂಟಕ್ಕೆ ಆಗಮಿಸಿದ್ದರು. ಈ ವೇಳೆ ಯುವಕ ಫರಾನ್ (24) ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದನು. ಆದರೆ ಸ್ಥಳದಿಂದ ಓಡಿ ಹೋಗುತ್ತಿದ್ದಂತೆಯೇ ಫರಾನ್ ಮ್ಯಾಟ್ ಎಡವಿ ಬಿದ್ದಿದ್ದು, ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಇತ್ತ ಹಲ್ಲೆಯಿಂದ ತೀವ್ರ ರಕ್ತಸ್ರಾವವಾಗಿ ಬಳಲುತ್ತಿದ್ದ ಸೇಠ್ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.