ಬೆಂಗಳೂರು: ಇಂದು ಬೆಳಗ್ಗೆ 6 ಗಂಟೆಯವರೆಗೂ ನನ್ನ ಹೆಸರು ಇತ್ತು. ಆದರೆ 6.10ಕ್ಕೆ ನನ್ನ ಹೆಸರನ್ನು ಕೈಬಿಟ್ಟಿದ್ದಾರೆ ಎಂದು ಶಾಸಕ ಉಮೇಶ್ ಕತ್ತಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಶಾಸಕನಾಗಿ 35 ವರ್ಷ ಆಯಿತು. ನಾನು ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ. 1996ಯಿಂದ 1999ವರೆಗೂ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. 2008-2013ವರೆಗೂ ಕೂಡ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಈ ಬಾರಿ ಕೂಡ ಮಂತ್ರಿ ಆಗಬೇಕೆಂಬ ಆಸೆ ಇತ್ತು. ಆದರೆ ಅರ್ಧ ಸಂಪುಟ ವಿಸ್ತರಣೆ ಮಾಡಿದ್ದಾರೆ, ಈಗ ನನ್ನ ಹೆಸರನ್ನು ಕೈಬಿಟ್ಟಿದ್ದಾರೆ. ಇನ್ನು ಅರ್ಧ ಸಂಪುಟ ವಿಸ್ತರಣೆ ಮಾಡಬೇಕಿದೆ. ಕಾದು ನೋಡಬೇಕಿದೆ. ನಾನು ಮುಖ್ಯಮಂತ್ರಿ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
8 ಸಲ ಜನ ಆಶೀರ್ವಾದ ಮಾಡಿದ್ದಾರೆ. ಹಾಗಾಗಿ ಹಿರಿಯನಾಗಿದ್ದೇನೆ. ನಾನು ಚಿಕ್ಕ ವಯಸ್ಸಿನಲ್ಲೇ ಶಾಸಕನಾಗಿದ್ದೆ. 6-8 ಬಾರಿ ಶಾಸಕನಾಗಿ, 13 ವರ್ಷಗಳ ಕಾಲ ಮಂತ್ರಿ ಆಗಿ ಕೆಲಸ ಮಾಡಿದ್ದೇನೆ. ನನಗೆ ಆಸೆ ಇದೆ, ವಯಸ್ಸಿದೆ. ಕೆಲಸ ಮಾಡುವ ಹಂಬಲ ಇದೆ. ಬೆಳಗಾವಿಯಲ್ಲಿ ಅತಿವೃಷ್ಟಿಯಿಂದ ತೊಂದರೆಯಾಗುತ್ತಿದ್ದು, ಅದನ್ನು ನಿಭಾಯಿಸಬೇಕು ಎಂಬ ಮನಸ್ಸಿದೆ. ಸಿಎಂ ನನಗೆ ಮಂತ್ರಿ ಸ್ಥಾನ ಕೊಡುತ್ತಾರೆ ಎಂಬ ಭರವಸೆ ಇದೆ ಎಂದರು.
ಬೆಳಗ್ಗೆ 6 ಗಂಟೆಯವರೆಗೂ ನನ್ನ ಹೆಸರು ಇತ್ತು. ಆದರೆ 6.10ಕ್ಕೆ ನನ್ನ ಹೆಸರನ್ನು ಕೈಬಿಟ್ಟಿದ್ದಾರೆ. ನಾನು ಹಾಗೂ ತಿಪ್ಪರೆಡ್ಡಿ ಹಿರಿಯರು. ಸಾಕಷ್ಟು ಜನರು ಆಶೀರ್ವಾದ ಮಾಡಿದ್ದಾರೆ. ಜನರ ಸೇವೆ ಮಾಡುವ ಇಚ್ಛೆ ನಮಗಿದೆ. ಅಂತಹ ಸಂದರ್ಭದಲ್ಲಿ ಹಿರಿಯರನ್ನು ಕೈಬಿಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ. ಯುವಕರನ್ನು ಬೆಳೆಸಬೇಕು ಎಂದು ಬಯಸುತ್ತಿದ್ದಾರೆ. ಇನ್ನು ಸಂಪುಟ ವಿಸ್ತರಣೆ ಆಗಬೇಕಿದೆ. ಕಾದು ನೋಡಬೇಕು ಎಂದು ಉಮೇಶ್ ಕತ್ತಿ ಹೇಳಿದ್ದಾರೆ.