ಚೆನ್ನೈ: ಹಿಂದೂ ದೇವತೆಗಳನ್ನು ಸತತವಾಗಿ ಅವಮಾನಿಸುತ್ತಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಚಿತ್ರ ನಿರ್ದೇಶಕಿ ಲೀನಾ ಮಣಿಮೇಕಲೈ ವಿರುದ್ಧ ವಿವಿಧೆಡೆ ದೂರುಗಳು ದಾಖಲಾಗುತ್ತಿವೆ. ಲೀನಾ ಅವರು ಮೊದಲ ಪೋಸ್ಟರ್ನಲ್ಲೇ ಕಾಳಿ ಕೈಗೆ ಸಿಗರೇಟು ನೀಡಿದ್ದರು. ನಂತರ ಮತ್ತೊಂದು ಪೋಸ್ಟ್ ಮಾಡಿದ್ದ ಅವರು ಶಿವ ಮತ್ತು ಪಾರ್ವತಿ ಕೈಯಲ್ಲೂ ಸಿಗರೇಟು ಕೊಡಿಸಿದ್ದರು.
ಇದರಿಂದಾಗಿ ಹಿಂದೂಪರ ಸಂಘಟನೆಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಕನ್ನಡದ ನಟಿ ಮಾಳವಿಕಾ ಅವಿನಾಶ್ ಸಹ ಈ ನಡೆಯನ್ನು ವಿರೋಧಿಸಿದ್ದರು. ವ್ಯಾಪಕ ವಿರೋಧಗಳ ನಡುವೆಯೂ ಚಿತ್ರದ ನಿರ್ದೇಶಕಿ ಲೀನಾ ಮಣಿಮೇಕಲೈ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ
ಟ್ವೀಟ್ನಲ್ಲಿ ಏನಿದೆ?
ನನ್ನ ಕಾಳಿ ವಿಲಕ್ಷಣವಾದರೂ ಸ್ವತಂತ್ರ ಮನೋಭಾವದ ಚೇತನ. ಪಿತೃ ಪ್ರಭುತ್ವದ ಮೇಲೆ ಉಗುಳುತ್ತಾಳೆ. ನನ್ನ ಕಾಳಿ ಹಿಂದುತ್ವವನ್ನು ಕಿತ್ತೊಗೆಯುತ್ತಾಳೆ, ಬಂಡವಾಳಶಾಹಿಯನ್ನು ಕಿತ್ತೊಗೆಯುತ್ತಾಳೆ. ತನ್ನ ಸಾವಿರ ಕೈಗಳಿಂದ ಎಲ್ಲರನ್ನು ಅಪ್ಪಿಕೊಳ್ಳುತ್ತಾಳೆ ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ಕಾಳಿಯ ರೌದ್ರಾವತಾರದ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.