ಹಾಸನ: ಜಿಲ್ಲೆಯಲ್ಲಿ ದೇವೇಗೌಡರು, ಅವರ ಕುಟುಂಬ ಬಿಟ್ಟು ರಾಜಕಾರಣ ಮಾಡಲು ಆಗಲ್ಲ. ಯಾವ ಶಾಸಕರು ಪಕ್ಷ ಬಿಡಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹೇಳಿದ್ದಾರೆ.
ಹಾಸನ ತಾಲೂಕಿಗೆ ಕಳಂಕ ಬಂದಿದೆ. ಇಡೀ ಜಿಲ್ಲೆಯಲ್ಲಿ ಕಪ್ಪು ಚುಕ್ಕೆಯಾಗಿ ಉಳಿದುಕೊಂಡಿದೆ. ಅದನ್ನು ಅಳಿಸಬೇಕು, ಅದನ್ನು ಅಳಿಸಲು ನಮ್ಮ ಕಾರ್ಯಕರ್ತರ ಜೊತೆ ಸೇರಿಕೊಂಡು ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತೇನೆ. ಈಗಾಗಲೇ ಪಂಚಾಯ್ತಿವಾರು ಕಾರ್ಯಕರ್ತರ ಸಭೆ ಶುರು ಮಾಡಿದ್ದೇನೆ. ಐದು ಪಂಚಾಯ್ತಿ ಮುಗಿದಿದ್ದು, ಇನ್ನು ಎರಡು ವಾರದಲ್ಲಿ ಎಲ್ಲಾ ಪಂಚಾಯ್ತಿಗಳು ಮುಗಿಯುತ್ತದೆ. ಕಾರ್ಯಕರ್ತರ ಅಭಿಪ್ರಾಯ ಏನಿದೆ ಎಂಬುದನ್ನು ದೇವೇಗೌಡರು, ಕುಮಾರಸ್ವಾಮಿ, ಜಿಲ್ಲೆಯ ಶಾಸಕರ ಗಮನಕ್ಕೆ ತರುತ್ತೇನೆ. ಆಮೇಲೆ ಹಾಸನಕ್ಕೆ ಯಾವ ಅಭ್ಯರ್ಥಿ ಸೂಕ್ತ ಎಂದು ನಿರ್ಧಾರ ಮಾಡುತ್ತೇವೆ. ಮತ್ತೆ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷದ ಶಾಸಕ ಆಯ್ಕೆಯಾಗಬೇಕು, ಆ ಕೆಲಸ ಮಾಡುವ ಜವಾಬ್ದಾರಿ ನನ್ನದು, ಅವರಿಗೆ, ಇವರಿಗೆ ಟಿಕೆಟ್ ಕೊಡಿ ಅಂತ ಹೇಳಲು ನಾನು ಯಾವ ಹೈಕಮಾಂಡ್ ಅಲ್ಲ ಎಂದು ಗುಡುಗಿದ್ದಾರೆ.
ಹಾಸನದ ದೇವಿಗೆರೆಗೆ ಬಾಗಿನ ಅರ್ಪಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾರ್ಚ್ ತಿಂಗಳಿನಿಂದ ಹಾಸನ ತಾಲೂಕನ್ನು ನೂಡಲ್ ತಾಲೂಕಾಗಿ ಆಯ್ಕೆ ಮಾಡಿಕೊಂಡಿದ್ದೇನೆ. ನನ್ನ ಕಾರ್ಯವ್ಯಾಪ್ತಿಯಲ್ಲಿ ಏನು ಜವಾಬ್ದಾರಿ ಇದೆ, ಕಾರ್ಯಕರ್ತರನ್ನು ಪ್ರೋತ್ಸಾಹಿಸಿ, ಪಕ್ಷ ಸಂಘಟನೆ ಮಾಡುತ್ತೇನೆ ಎಂದಿದ್ದಾರೆ.
ಶಾಸಕರುಗಳಾದ ಕೆ.ಎಂ.ಶಿವಲಿಂಗೇಗೌಡ, ಎ.ಟಿ.ರಾಮಸ್ವಾಮಿ ಪಕ್ಷ ಬಿಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಸೂರಜ್ ಜಿಲ್ಲೆಯಲ್ಲಿ ದೇವೇಗೌಡರು, ಅವರ ಕುಟುಂಬ ಬಿಟ್ಟು ರಾಜಕಾರಣ ಮಾಡಲು ಆಗಲ್ಲ. ನನಗೆ ಇನ್ನೂ ಹೆಚ್ಚಿನ ವಿಶ್ವಾಸವಿದೆ. ಇಬ್ಬರು ಶಾಸಕರು ಎಲ್ಲೂ ಹೋಗಲ್ಲ. ಚುನಾವಣೆ 2022ಕ್ಕೆ ಇಲ್ಲ 2023ಕ್ಕೆ ಬರತ್ತೋ, ಇದೇ ಹಾಲಿ ಶಾಸಕರು ಸ್ಪರ್ಧೆ ಮಾಡಿ ಜಯಭೇರಿ ಭಾರಿಸುತ್ತಾರೆ ಎಂದಿದ್ದಾರೆ.
ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾಗಿರುವ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇನೆ. ಕಾಫಿ, ಭತ್ತ, ಜೋಳ ನಾಶವಾಗಿ ರೈತರಿಗೆ ಅನಾನುಕೂಲ ಪರಿಸ್ಥಿತಿ ಇದೆ. ಬೆಳೆ ನಷ್ಟದ ಬಗ್ಗೆ ವರದಿ ಕೊಡಲು ಆರ್ಐ, ವಿಐಗಳಿಗೆ ಸೂಚನೆ ಕೊಡಿ ಎಂದು ಎಲ್ಲಾ ತಹಸೀಲ್ದಾರ್ಗಳಿಗೆ ಹೇಳಿದ್ದೇನೆ. ಪಕ್ಷಾತೀತವಾಗಿ ಕೆಲಸ ಮಾಡಿ ಅಂಥ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.