ಬೆಂಗಳೂರು: ಟಾಯ್ಲೆಟ್ ಗೋಡೆ ಕೊರೆದು 77ಕೆಜಿ ಚಿನ್ನಾಭರಣ ಕಳವು ಮಾಡಿರುವ ಭಯಾನಕ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ನಗರದ ಪುಲಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಲಿಂಗರಾಜುಪುರ ಮೇಲ್ಸೆತುವೆ ಬಳಿಯ ಮುತ್ತೂಟ್ ಫೈನಾನ್ಸ್ ನಲ್ಲಿ ಕಳ್ಳತನವಾಗಿದ್ದು, ಕಳೆದ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಭಾನುವಾರ ರಜೆ ಇದ್ದ ಕಾರಣ ಸೋಮವಾರ ಭಾರೀ ಪ್ರಮಾಣದ ಚಿನ್ನಾಭರಣ ಕಳವಾಗಿರುವುದು ಬೆಳಕಿಗೆ ಬಂದಿದೆ.
ಮುತ್ತೂಟ್ ಫೈನಾನ್ಸ್ ನಲ್ಲಿನ ಶೌಚಾಲಯದ ಗೋಡೆ ಕೊರೆದು ಒಳ ನುಗ್ಗಿ ಗ್ಯಾಸ್ ಕಟ್ಟರ್ ಮೂಲಕ ಮತ್ತೊಂದು ಗೋಡೆ ಕೊರೆದಿದ್ದಾರೆ. ನಂತರ ಫೈನಾನ್ಸ್ ಕಚೇರಿಯಲ್ಲಿನ ಚಿನ್ನಾಭರಣವನ್ನು ಕಳವು ಮಾಡಿದ್ದಾರೆ.
ನೇಪಾಳಿ ಮೂಲದ ಗ್ಯಾಂಗ್ ಈ ಚಿನ್ನಾಭರಣ ಕಳವು ಮಾಡಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಮುತ್ತೂಟ್ ಫೈನಾನ್ಸ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ನೇಪಾಳಿ ವ್ಯಕ್ತಿ ಕೂಡ ಕಾಣೆಯಾಗಿದ್ದು, ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಪ್ರಕರಣ ಬೇಧಿಸಲು ಸದ್ಯ ನಾಲ್ಕು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದ್ದು, ತನಿಖೆ ಮುಂದುವರಿದಿದೆ.