ಬೆಂಗಳೂರು: ಆಯುಧ ಪೂಜೆಯಂದು ಶಸ್ತಾಸ್ತ್ರಗಳನ್ನ ಇಟ್ಟು ಪೂಜೆ ಮಾಡಿದ್ದ ಜಯ ಕರ್ನಾಟಕ ಸಂಘಟನೆಯ ಮುಖ್ಯಸ್ಥ ಮುತ್ತಪ್ಪ ರೈ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಇತ್ತೀಚಿಗಷ್ಟೆ ಸಿಸಿಬಿಯ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕಾರ ಮಾಡಿಕೊಂಡಿರುವ ಅಲೋಕ್ ಕುಮಾರ್ ಮುತ್ತಪ್ಪ ರೈ ಅವರಿಗೆ ನೋಟಿಸ್ ಕಳಿಸಿದ್ದಾರೆ. ಇಷ್ಟೊಂದು ಆಯುಧಗಳಿಗೆ ಸರ್ಕಾರದಿಂದ ಅನುಮತಿ ಇದೆಯೇ? ನಿಮ್ಮ ಮೇಲೆ ಏಕೆ ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿ ಸಿಸಿಬಿ ನೋಟಿಸ್ ಜಾರಿ ಮಾಡಿದೆ. ನೋಟಿಸ್ ಜಾರಿಯಾದ 24 ಗಂಟೆಯ ಒಳಗಡೆ ಮುತ್ತಪ್ಪ ರೈ ಸಿಸಿಬಿ ಮುಂದೆ ಹಾಜರಾಗಿ ವಿವರಣೆ ನೀಡಬೇಕಾಗುತ್ತದೆ.
ಆಯುಧ ಪೂಜೆಯಂದು ಮುತ್ತಪ್ಪ ರೈ ಗನ್, ಪಿಸ್ತೂಲ್, ರಿವಾಲ್ವಾರ್, ಡ್ಯಾಗರ್ ಗೆ ಪೂಜೆ ಮಾಡಿದ್ದರು. ಶಸ್ತಾಸ್ತ್ರಗಳನ್ನ ಇಟ್ಟು ಪೂಜೆ ಮಾಡಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನ ಕಂಡ ಜನರು ಪೊಲೀಸರಿಗೆ ಪ್ರಶ್ನೆಗಳ ಸುರಿಮಳೆ ಹರಿಸಿದ್ದರು. ಇದರ ಬೆನ್ನಲ್ಲೇ ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ ಸಿಸಿಬಿ ನೋಟಿಸ್ ಜಾರಿ ಮಾಡಿದೆ.
1959ರ ಶಸ್ತ್ರಾಸ್ತ್ರ ಕಾಯ್ದೆಯ ಪ್ರಕಾರ ಯಾವುದೇ ಶಸ್ತ್ರಾಸ್ತ್ರಗಳನ್ನ ವ್ಯಕ್ತಿಗಳು ಹೊಂದಿರಬೇಕಾದರೇ ಪರವಾನಿಗೆ ಪಡೆದಿರಬೇಕು. ಪರವಾನಿಗೆ ಹೊಂದದೇ ಶಸ್ತ್ರಾಸ್ತ್ರಗಳನ್ನ ಹೊಂದಿದ್ದರೆ ಅದು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಾಗುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv