ಬೆಂಗಳೂರು: ರಾಮಮಂದಿರಕ್ಕೆ ಹಿಂದೂ-ಮುಸ್ಲಿಂ ಮಧ್ಯೆ ಕಿತ್ತಾಟ, ರಕ್ತಪಾತವೇ ಆಯಿತು. ಆದರೆ ಬೆಂಗಳೂರಿನಲ್ಲಿ ಇದೆಲ್ಲವನ್ನು ಮರೆಯುವಂತಹ ಅಪರೂಪದ ಘಟನೆ ನಡೆದಿದೆ. ಮುಸ್ಲಿಮರು ಸೇರಿ ಮಸೀದಿಯಲ್ಲ ಮಂದಿರವನ್ನು ನಿರ್ಮಿಸಿದ್ದಾರೆ.
ಬೆಂಗಳೂರಿನ ಬಾಪೂಜಿನಗರದಲ್ಲಿ ಒಂದು ವಿಷೇಶವಾದ ಘಟನೆ ನಡೆದಿದೆ. ಮಸೀದಿ ಮೂಲಕ ದೇವಾಲಯ ನಿರ್ಮಾಣವಾಗಿದೆ. ಮುಸ್ಲಿಮರು ಸೇರಿಕೊಂಡು ಹಿಂದೂ ದೇವಾಲಯವನ್ನ ನಿರ್ಮಾಣ ಮಾಡಿದ್ದಾರೆ.
ಹಲವು ವರ್ಷಗಳಿಂದ ಸೌಹಾರ್ದವಾಗಿ ನಾವು ಅಣ್ಣ-ತಮ್ಮಂದಿರ ರೀತಿ ಬದುಕುತ್ತಿದ್ದೇವೆ. ಮೂರು ವರ್ಷಗಳ ಹಿಂದೆ ನಾವು ಇಲ್ಲಿ ಮಸೀದಿಯನ್ನ ನಿರ್ಮಾಣ ಮಾಡುವ ಕೆಲಸ ಶುರು ಮಾಡಿದ್ವಿ. ಮಸೀದಿ ನಿರ್ಮಾಣದ ಸಂದರ್ಭದಲ್ಲಿ ಹಿಂದೂಗಳು ನಮಗೆ ಸಹಾಯ ಮಾಡಿದ್ದರು. ಆಗ ನಾವು ಸಣ್ಣದಾಗಿದ್ದ ಕಬ್ಬಾಳಮ್ಮ ದೇವಾಲಯವನ್ನ ದೊಡ್ಡದಾಗಿ ಕಟ್ಟುವ ಭರವಸೆ ನೀಡಿದ್ವಿ. ಅದಕ್ಕಾಗಿ ಈಗ ದೇವಾಲಯ ನಿರ್ಮಾಣ ಮಾಡಿದ್ದೀವಿ ಎಂದು ಮುಸ್ಲಿಂ ಮುಖಂಡರು ಹೇಳಿದ್ದಾರೆ.
ಮುಸ್ಲಿಮರ ಈ ಕಾರ್ಯಕ್ಕೆ ಹಿಂದೂಗಳು ಹರ್ಷ ವ್ಯಕ್ತಪಡಿಸಿದ್ದಾರೆ. ದೇವಾಲಯವನ್ನ ನಿರ್ಮಾಣ ಮಾಡಲು ಮುಸ್ಲಿಮರು ಮುಂದೆ ಬಂದಾಗ ತುಂಬಾನೇ ಖುಷಿಯಾಗಿತ್ತು. ನಾವು ಮೊದಲಿನಿಂದಲೂ ತುಂಬಾ ಒಗ್ಗಟ್ಟಾಗೇ ಇದ್ದೀವಿ. ಎಲ್ಲಾ ದೇವರು ಒಂದೇ ಎಂಬ ತರ ದೇವಸ್ಥಾನ ಕಟ್ಟಿಕೊಟ್ಟಿದ್ದಾರೆ. ನಾವು ಮುಂದೆಯೂ ಇದೇ ರೀತಿ ಇರುತ್ತೇವೆ. ಯಾರಿಂದ ಯಾರಿಗೂ ತೊಂದರೆಯಾಗದೇ ಒಟ್ಟಿಗೆ ಜೀವನ ನಡೆಸುತ್ತಿದ್ದೇವೆ ಎಂದು ಹಿಂದೂ ಮಹಿಳೆಯರು ಹೇಳಿದ್ದಾರೆ.