ಚಿಕ್ಕಮಗಳೂರು: ತಾಲೂಕಿನ ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾದಲ್ಲಿ ಬುಧವಾರದಿಂದ ಆರಂಭವಾಗುವ 3 ದಿನಗಳ ಉರುಸ್ (Urs) ಆಚರಣೆಗೆ ಮುಸ್ಲಿಂ (Muslim) ಸಮುದಾಯ ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದೆ.
ದತ್ತಪೀಠದ (Dattapita) ಆಡಳಿತಕ್ಕಾಗಿ ರಾಜ್ಯ ಸರ್ಕಾರ ರಚಿಸಿರುವ ದತ್ತಪೀಠ ವ್ಯವಸ್ಥಾಪನ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿರುವ ಮುಸ್ಲಿಂ ಸಮುದಾಯ ಉರುಸ್ನಿಂದ ದೂರ ಉಳಿಯುವ ಸಾಧ್ಯತೆ ಇದೆ. ವ್ಯವಸ್ಥಾಪನ ಮಂಡಳಿ ಹಾಗೂ ಜಿಲ್ಲಾಡಳಿದ ಮುಂದಾಳತ್ವದಲ್ಲಿ ಉರುಸ್ ಆಚರಣೆಯನ್ನು ತಿರಸ್ಕಿರಿಸಿರುವ ಮುಸ್ಲಿಂ ಸಮುದಾಯ ಸರ್ಕಾರ, ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ಹೊರಹಾಕಿದೆ.
ರಾಜ್ಯ ಸರ್ಕಾರಕ್ಕೆ 4 ಬೇಡಿಕೆ ಇಟ್ಟಿರುವ ಮುಸ್ಲಿಂ ಸಮುದಾಯ ಉರುಸ್ನಿಂದ ಅಂತರ ಕಾಪಾಡಿಕೊಳ್ಳಲು ಮುಂದಾಗಿದೆ. ದತ್ತಪೀಠದಲ್ಲಿ ಅರ್ಚಕರ ನೇಮಕಾತಿ ರದ್ದು ಹಾಗೂ ವ್ಯವಸ್ಥಾಪನಾ ಮಂಡಳಿ ರದ್ದು ಮಾಡಬೇಕು. 8 ಜನರ ವ್ಯವಸ್ಥಾಪನಾ ಮಂಡಳಿಯಲ್ಲಿ 4 ಜನ ಹಿಂದೂ ಹಾಗೂ 4 ಜನ ಮುಸ್ಲಿಮರು ಇರಬೇಕು ಎಂದು ಆಗ್ರಹಿಸಿದ್ದಾರೆ. ಗುಹೆಯೊಳಗಿರುವ ಗೋರಿಗಳಿಗೆ ಹಸಿರು ಬಟ್ಟೆ ಹೊದಿಸಿ ಪೂಜೆಗೆ ಅವಕಾಶ ನೀಡಬೇಕು. ದತ್ತಪೀಠದಲ್ಲಿರುವ ಮಸೀದಿ ಓಪನ್ ಮಾಡಿ ನಮಾಜ್ ಮಾಡಲು ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸೋಮಣ್ಣ ಸೇರಿ ಯಾರೊಬ್ಬರೂ ಬಿಜೆಪಿ ಬಿಡುವುದಿಲ್ಲ: ಬಿ.ಎಸ್. ಯಡಿಯೂರಪ್ಪ
ಸರ್ಕಾರ ದತ್ತಪೀಠ ಆಡಳಿತ ಮಂಡಳಿ ರಚನೆ ಬಳಿಕ ಹಿಂದೂ ಅರ್ಚಕರ ನೇಮಕಾತಿ ಮಾಡಿ ದತ್ತಪೀಠದಲ್ಲಿ ಹೋಮ-ಹವನ ಮಾಡಿ ದತ್ತಜಯಂತಿ ಆಚರಿಸಿದೆ. ಅದೇ ರೀತಿ ನಮಗೂ ನಮ್ಮ ಸಂಪ್ರದಾಯದಂತೆ ಉರುಸ್ ಆಚರಣೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಜಿಲ್ಲಾಡಳಿತದ ಉರುಸ್ಗೆ ವಿರೋಧ ವ್ಯಕ್ತಪಡಿಸಿ, ಉರುಸ್ನಿಂದ ದೂರ ಉಳಿಯಲು ಚಿಂತಿಸಿದ್ದಾರೆ. ವಿವಾದಿತ ದತ್ತಪೀಠದಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಸಾಧ್ಯತೆಯೂ ಇದೆ. ಮುಂಜಾಗೃತಾ ಕ್ರಮವಾಗಿ ದತ್ತಪೀಠದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡಾ ಏರ್ಪಡಿಸಲಾಗಿದೆ. ಇದನ್ನೂ ಓದಿ: ಮಾ.9ರ ಕರ್ನಾಟಕ ಬಂದ್ ವಾಪಸ್ ಪಡೆದ ಕಾಂಗ್ರೆಸ್