ಹೈದರಾಬಾದ್: ಮುಸ್ಲಿಮ್ ಸಮುದಾಯದವರು ಮುಸ್ಲಿಮ್ ಅಭ್ಯರ್ಥಿಗಳಿಗೆ ಮತ ಹಾಕಬೇಕೆಂದು ಆಲ್ ಇಂಡಿಯನ್ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಪಕ್ಷದ ಅಧ್ಯಕ್ಷ, ಹೈದರಬಾದಿನ ಸಂಸದ ಅಸಾದುದ್ದಿನ್ ಓವೈಸಿ ಹೇಳಿಕೆಯೊಂದನ್ನು ನೀಡಿದ್ದು ಈಗ ವಿವಾದಕ್ಕೆ ಗುರಿಯಾಗಿದೆ.
ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮುಸ್ಲಿಮ್ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಸಮುದಾಯದ ಸದಸ್ಯರಿಗೆ ಒತ್ತಾಯ ಮಾಡಿದ್ದಾರೆ.
ಹಪೂರ್ ನಲ್ಲಿ ನಡೆದ ಕಾಸಿಂ ಹತ್ಯೆ ನಮ್ಮನ್ನು ಚಿಂತೆಗೀಡುಮಾಡಿದೆ. ಆದರೆ ನಾನು ನಿಮಗೆ ಈ ವಿಚಾರಕ್ಕೆ ಕಣ್ಣೀರು ಸುರಿಸಿ ಎಂದು ಹೇಳುತ್ತಿಲ್ಲ. ಆದರೆ ನಿಮ್ಮ ಆತ್ಮಸಾಕ್ಷಿ ಅನುಗುಣವಾಗಿ ನಡೆಯುವಂತೆ ಎಚ್ಚರಿಸುತ್ತಿದ್ದೇನೆ. ಜಾತ್ಯಾತೀತತೆಯ ಕುರಿತು ಮಾತನಾಡುತ್ತಿರುವ ಜನರು ದೊಡ್ಡ ಡಕಾಯಿತರು ಮತ್ತು ಅವಕಾಶವಾದಿಗಳಾಗಿದ್ದಾರೆ. ಅವರು ಮುಸ್ಲಿಮರನ್ನು 70 ವರ್ಷಗಳಿಂದ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ನಮಗೆ ಬೆದರಿಕೆ ಹಾಕಿ ನಮ್ಮನ್ನು ಸುಮ್ಮನಿರುವಂತೆ ಮಾಡಿದ್ದಾರೆ ಎಂದು ದೂರಿದರು.
ಈಗ ಮುಸ್ಲಿಮರು ಅವರ ಹಕ್ಕಿಗಾಗಿ ಹೋರಾಡಬೇಕಿದೆ. ನೀವು ಜ್ಯಾತ್ಯಾತೀತೆಯನ್ನು ಬದುಕಿಸಬೇಕೆಂದಿದ್ದರೆ ನಿಮಗಾಗಿ ಹೋರಾಡಿ. ಅದನ್ನು ತಿಳಿಯಲು ರಾಜಕೀಯ ಶಕ್ತಿಯಾಗಿ ಮುಸ್ಲಿಮ್ ನಾಯಕರು ಗೆಲ್ಲುವಂತೆ ಮಾಡಿ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಬಹಿರಂಗವಾಗಿಯೇ ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಓವೈಸಿ ಹಪೂರ್ ಘಟನೆ ಸಂಬಂಧಿಸಿದಂತೆ ಅವಾಚ್ಯ ಶಬ್ಧಗಳನ್ನ ಬಳಸಿದ್ದಾರೆ. ಅಲ್ಲದೇ ಎಷ್ಟೋ ಮುಸ್ಲಿರನ್ನು ಬಂಧಿಸಲಾಗಿದೆ. ಇದೇನಾ ನಿಮ್ಮ ಸಬ್ ಕಿ ಸಾಥ್, ಸಬ್ ಕಿ ವಿಕಾಸ್ ಎಂದು ಮೋದಿಯವರ ವಿರುದ್ಧ ಹರಿಹಾಯ್ದಿದರು.
ಭಾರತೀಯ ಜನತಾ ಪಾರ್ಟಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಹಿಂದೂ ಮತ ಬ್ಯಾಂಕ್ ಗಾಗಿ ಹಾತೊರೆಯುತ್ತಿವೆ. ಆದರೆ ಮುಸ್ಲಿಂರನ್ನು ಮತಬ್ಯಾಂಕ್ ಎಂದು ಹೇಳುತ್ತ ಎರಡೂ ಪಕ್ಷಗಳು ವಂಚಿಸುತ್ತಿವೆ ಎಂದು ದೂರಿದರು.
ಉತ್ತರಪ್ರದೇಶದ ಹಪೂರ್ ದಲ್ಲಿ ಹಸು ಕಳ್ಳಸಾಗಾಣಿಗೆ ಶಂಕೆಯ ಹಿನ್ನೆಲೆಯಲ್ಲಿ ಗುಂಪೊಂದು ಕಾಸೀಂ(38) ಹತ್ಯೆಗೈದರೆ, ಶಾಮಿಯುದ್ದೀನ್(65) ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು.