– ಈಗಲೂ ದೇವಸ್ಥಾನಕ್ಕೆ ಬರ್ತಾರೆ, ಶ್ರೀರಾಮನ ಪೂಜೆ ಮಾಡ್ತಾರೆ
ಮೈಸೂರು: ಹಿಂದೂ-ಮುಸ್ಲಿಂ (Hindu-Muslims) ನಡುವೆ ಕೋಮು ಸಂಘರ್ಷಕ್ಕೆ ದಾರಿ ಮಾಡಿಕೊಡುವ ಘಟನೆಗಳ ನಡುವೆಯೂ ಹಿಂದೂ-ಮುಸ್ಲಿಮರ ಮಧ್ಯೆ ಏಕತೆ ಸಂದೇಶ ಸಾರುವ ಪ್ರಸಂಗಗಳು ಅಚ್ಚರಿ ಮೂಡಿಸುತ್ತಿವೆ. ಇದಕ್ಕೆ ಮೈಸೂರಿನ ದೇವರಾಜ ಮೊಹಲ್ಲಾದ (Mysuru Devaraja Mohalla) ಮುಸ್ಲಿಂ ಬಾಂಧವರು ಸಾಕ್ಷಿಯಾಗಿದ್ದಾರೆ.
ಹೌದು. ಇಲ್ಲಿನ ದೇವರಾಜ ಮೊಹಲ್ಲಾದಲ್ಲಿ ನಿರ್ಮಾಣಗೊಂಡಿರುವ `ಶ್ರೀಲೋಕಾಭಿರಾಮ’ ರಾಮಮಂದಿರ (Lokabhirama Ram Mandir) ನಿರ್ಮಾಣಕ್ಕೆ ಮುಸ್ಲಿಮರೇ ಹೆಚ್ಚಿನ ದೇಣಿಗೆ ಕೊಟ್ಟಂತಹ ಉದಾಹರಣೆ ಇದೆ. ಇದನ್ನೂ ಓದಿ: Ayodhya Ram Mandir: ಕಾಶಿ ಯಜ್ಞಶಾಲೆಯಲ್ಲಿ 40 ದಿನ ವಿಶೇಷ ಪೂಜೆ – ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ
1991ರ ಸಮಯದಲ್ಲಿ ಮೈಸೂರಿನ ದೇವರಾಜ ಮೊಹಲ್ಲಾದಲ್ಲಿ ನಿರ್ಮಾಣವಾದ ಶ್ರೀರಾಮ ಮಂದಿರಕ್ಕೆ ಅತಿ ಹೆಚ್ಚಿನ ದೇಣಿಗೆಯನ್ನು ಇಲ್ಲಿನ ಮುಸ್ಲಿಂ ಉದ್ಯಮಿಗಳು ನೀಡಿದ್ದಾರೆ. 1,500 ರೂ. ನಿಂದ 8,000 ರೂ. ವರೆಗೂ ದೇಣಿಗೆ ನೀಡಿದ್ದಾರೆ. ಅಂತಹವರ ಸ್ಮರಣಾರ್ಥವಾಗಿ ಅವರ ಹೆಸರು, ಫೋಟೋಗಳನ್ನ ಇಂದಿಗೂ ಮಂದಿರದ ಒಳಗೆ ಹಾಕಲಾಗಿದೆ. ಅಲ್ಲದೆ ಈ ಶ್ರೀರಾಮ ದೇವಸ್ಥಾನಕ್ಕೆ ಮುಸ್ಲಿಂ ಬಾಂಧವರು ಬಂದು ಈಗಲೂ ಶ್ರೀರಾಮನಿಗೆ ಪೂಜೆ ಸಲ್ಲಿಸುತ್ತಾರೆ.
ಈ ಕುರಿತು `ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿರುವ ಉದ್ಯಮಿಯೊಬ್ಬರ ಪುತ್ರ, ನಮ್ಮ ತಂದೆ ಮೀರ್ ಬಷೀರ್ ಅಹ್ಮದ್ ಖುರೇಷಿ ಹಣ್ಣಿನ ವ್ಯಾಪಾರಾದ ಜೊತೆಗೆ, ಸಮಾಜ ಸೇವೆ ಮಾಡುತ್ತಿದ್ದರು. 1991ರ ಅವಧಿಯಲ್ಲೇ ಇಲ್ಲಿನ ಮಂದಿರ ನಿರ್ಮಾಣಕ್ಕೆ 8 ಸಾವಿರ ರೂ. ನೀಡಿದ್ದಾರೆ. ನಾವು ಹುಟ್ಟಿ ಬೆಳೆದಿದ್ದು ಇಲ್ಲೇ, ನಮ್ಮ ತಂದೆ ಚಿಕ್ಕಂದಿನಿಂದಲೂ ನನ್ನನ್ನು ಇಲ್ಲಿನ ರಾಮಮಂದಿರಕ್ಕೆ ಕರೆದುಕೊಂಡು ಬರುತ್ತಿದ್ದರು. ಈಗಲೂ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Ayodhya Ram Mandir: ರಾಮಮಂದಿರಕ್ಕೆ 4 ಮಾರ್ಗ – ರಾಮನೂರಿಗೆ ಬರುವ ಭಕ್ತರಿಗಿದು ಮೋಕ್ಷದ ಹಾದಿ
ಮುಂದುವರಿದು, 1992ರ ಬಾಬರಿ ಮಸೀದಿ ಹೋರಾಟದ ಸಂದರ್ಭದಲ್ಲಿ ಹಿಂದೂ-ಮುಸ್ಲಿಮರ ಗಲಾಟೆ ಎಲ್ಲೆಡೆ ವ್ಯಾಪಿಸಿತ್ತು. ಆದ್ರೆ ನಮ್ಮ ಮೊಹಲ್ಲಾದಲ್ಲಿ ಅದರ ಕಹಿ ಅನುಭವ ನಮಗೆ ತಾಕಲಿಲ್ಲ. ನಾವೆಲ್ಲರೂ ಅಂದಿನಿಂದ ಈವರೆಗೆ ಅಣ್ಣ-ತಮ್ಮಂದಿರಂತೆ ಇದ್ದೇವೆ. ಈಗಲೂ ದೇವಸ್ಥಾನಕ್ಕೆ ಬರುತ್ತೇವೆ. ದೇವಸ್ಥಾನದ ಕೆಲಸ ಏನೇ ಇದ್ದರೂ ಒಟ್ಟಾಗಿ ಸೇರಿ ಮಾಡುತ್ತೇವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.