ಯಾದಗಿರಿ: ಮುಸ್ಲಿಂ ಯುವಕನೊಬ್ಬ ಅಯ್ಯಪ್ಪ ಮಾಲೆ ಧರಿಸುವ ಮೂಲಕ ಭಾವೈಕ್ಯತೆಯನ್ನು ಎತ್ತಿ ತೋರಿಸಿದ್ದಾರೆ. ನಿಷ್ಠೆ ಮತ್ತು ಶ್ರದ್ಧೆಯಿಂದ ಅಯ್ಯಪ್ಪ ಮಾಲಾಧಾರಿಗಳು ಪಾಲಿಸುವ ನಿಯಮಗಳನ್ನು ಪಾಲಿಸುವುದರ ಮೂಲಕ ಇಡೀ ರಾಷ್ಟ್ರಕ್ಕೆ ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಸಾರಿದ್ದಾರೆ.
ಮಹಾರಾಷ್ಟ್ರ ಮೂಲದ ಯುವಕ ಬಾಬ್ಲು ಅಫಸರ್ ಡಾಂಗೆ ಅಯ್ಯಪ್ಪ ಮಾಲೆ ತೊಟ್ಟ ಮುಸ್ಲಿಂ ಯುವಕ. ಬಾಬ್ಲು ಸದ್ಯ ಯಾದಗಿರಿ ಜಿಲ್ಲೆಯ ಗುರುಮಠಕಲ್ನಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಪಟ್ಟಣದಲ್ಲಿ ಹಿಂದೂಗಳ ಜೊತೆ ಹೆಚ್ಚು ಒಡನಾಟ ಹೊಂದಿರುವ ಬಾಬ್ಲುಗೆ ಅಯ್ಯಪ್ಪ ಮಾಲೆ ಧರಿಸಲು ಅವರ ಕಾರು ಮಾಲೀಕ ಪ್ರೇರಣೆ.
ತಮ್ಮ ಧರ್ಮದ ಅಲ್ಲಾನನ್ನು ಆರಾಧಿಸುವುದರ ಜೊತೆಗೆ ಬಾಬ್ಲು ಅಯ್ಯಪ್ಪನ ಪರಮ ಭಕ್ತ. ಅಲ್ಲಾನ ಜೊತೆ ಹಿಂದೂ ದೇವರ ಆರಾಧನೆ ಮಾಡಿಕೊಂಡು ಬರುತ್ತಿದ್ದಾರೆ. ಬಾಬ್ಲು ಅಫಸರ್ ಇದೇ ಮೊದಲನೇ ಬಾರಿ ಅಯ್ಯಪ್ಪ ಮಾಲಾಧಾರಣೆ ಮಾಡಿದ್ದು, 41 ದಿನಗಳ ಕಾಲ ಮಣಿಕಂಠನ ವ್ರತ ಆಚರಣೆ ಮಾಡಬೇಕಾಗುತ್ತದೆ. ಹೀಗಾಗಿ ಗುರುಮಠಕಲ್ ಪಟ್ಟಣದಲ್ಲಿರುವ ಅಯ್ಯಪ್ಪನ ಮಂದಿರದಲ್ಲಿ ಎಲ್ಲಾ ಮಾಲಾಧಾರಿಗಳ ಜೊತೆಗೆ ಬೆಳಗ್ಗೆ ಮತ್ತು ಸಾಯಂಕಾಲ ವಿಶೇಷ ಪೂಜೆಯ ಮೂಲಕ ಅಯ್ಯಪ್ಪನ ಸ್ಮರಣೆ ಮಾಡುತ್ತಿದ್ದಾರೆ.