ಚಿಕ್ಕಮಗಳೂರು: ರಾಜ್ಯಾದ್ಯಂತ ದಸರಾ ಸಂಭ್ರಮ. ಹಿಂದೂಗಳಿಗೆ ಶ್ರೇಷ್ಠವಾದ ಹಬ್ಬ. ಎಲ್ಲರೂ ತಮ್ಮ-ತಮ್ಮ ವಾಹನಗಳಿಗೆ ಅಲಂಕರಿಸಿ, ಪೂಜೆ ಮಾಡಿ ಓಡಾಡಿ ಸಂಭ್ರಮಿಸುತ್ತಾರೆ. ಆದರೆ ಚಿಕ್ಕಮಗಳೂರಿನಲ್ಲಿ ಮುಸ್ಲಿಂ ಯುವಕ ಕೂಡ ತನ್ನ ಬಸ್ಸುಗಳಿಗೆ ಹಾಗೂ ವಾಹನಗಳಿಗೆ ಪೂಜೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಚಿಕ್ಕಮಗಳೂರಿನ ಎಸ್ಎಂಎಸ್ ಬಸ್ ಮಾಲೀಕನಾದ ಸಿರಾಜ್, ಹಿಂದೂಗಳು ನಾಚುವಂತೆ ಆಯುಧ ಪೂಜೆ ಆಚರಿಸಿದ್ದಾರೆ. ಸಿರಾಜ್ ಹಿಂದೂಗಳಂತೆ ತಾನೂ ಹಬ್ಬ ಮಾಡಿ, ಎಲ್ಲರಿಗೂ ಸಿಹಿ ಹಂಚಿ ನಾವೆಲ್ಲಾ ಒಂದೇ ಎಂಬ ಸಂದೇಶ ಸಾರಿದ್ದಾರೆ.
ಸಿರಾಜ್ ಅವರು ತಮ್ಮ ಆರು ಬಸ್ಸುಗಳನ್ನು ಶುಚಿ ಮಾಡಿ, ನಂತರ ಬಸ್ಸಿಗೆ ಚೆಂಡು ಹೂ, ಬಲೂನ್, ಬಾಳೆ ದಿಂಡು ಹಾಗೂ ಮಾವಿನ ತೋರಣದಿಂದ ಸಿಂಗರಿಸಿದ್ದಾರೆ. ಬಳಿಕ ವಾಹನಗಳಿಗೆ ಅರಿಶಿನ-ಕುಂಕುಮ, ವಿಭೂತಿ ಬಳಿದು ಆರತಿ ಮಾಡಿ ಪೂಜೆ ಮಾಡಿದ್ದಾರೆ.
ತನ್ನೆಲ್ಲಾ ಬಸ್ಸುಗಳನ್ನು ಅಲಂಕರಿಸಿ ಹಿಂದೂ-ಮುಸ್ಲಿಂ ಎಲ್ಲರನ್ನೂ ಕರೆಸಿ ಪೂಜೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಎಲ್ಲರಿಗೂ ಸಿಹಿ ಹಂಚಿ ಆಯುಧ ಪೂಜೆಯ ಶುಭಾಶಯ ವಿನಿಮಯ ಮಾಡಿಕೊಂಡು, ಹಿಂದೂ-ಮುಸ್ಲಿಂ ಬಾಯಿ-ಬಾಯಿ ಎಂದೂ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.