ಮಂಗಳೂರು: ಕಳೆದ ಕೆಲ ದಿನಗಳ ಹಿಂದೆ ವರನೊಬ್ಬ ಕೊರಗಜ್ಜನ ವೇಷ ಧರಿಸಿ ಕುಣಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಉಮರುಲ್ಲಾ ಬಾಷಿತ್ ಎಂದು ಗುರುತಿಸಲಾಗಿದೆ. ಈತ ಮಂಗಳೂರು ಕೊರಗಜ್ಜನ ಹೋಲುವ ವೇಷ ಧರಿಸಿ ಅವಮಾನ ಮಾಡಿ, ಸುದ್ದಿಯಾಗುತ್ತಿದ್ದಂತೆಯೇ ಎಸ್ಕೇಪ್ ಆಗಿದ್ದ. ಪ್ರಕರಣ ಸಂಬಂಧ ಈ ಹಿಂದೆಯೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಸದ್ಯ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಬಾಷಿತ್ ನನ್ನು ವಿಟ್ಲ ಠಾಣೆಯ ಪೊಲೀಸರು ಕೇರಳದ ಕೊಚ್ಚಿಯ ನೆಡುಂಬನ್ ಶೇರಿ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಅಲ್ಲಿನ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ವರಿಷ್ಠಾಧಿಕಾರಿ ಋಷಿಕೇಷ್ ಸೋನಾವಣೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮದುವೆ ಮನೆಯಲ್ಲಿ ಕೊರಗಜ್ಜನಿಗೆ ಅವಮಾನ – ಇಬ್ಬರು ಅರೆಸ್ಟ್, ಮದುಮಗ ನಾಪತ್ತೆ
ಏನಿದು ಘಟನೆ..?
ಉಪ್ಪಳದ ಯುವಕ ಉಮರುಲ್ಲಾ ಬಾಷಿತ್ ಜೊತೆ ಕೊಳ್ನಾಡು ಗ್ರಾಮದ ಅಝೀಝ್ ಎಂಬವರ ಮಗಳ ಮದುವೆ ನಿಶ್ಚಯವಾಗಿತ್ತು. ವಧುವಿನ ಮನೆಗೆ ರಾತ್ರಿ ವರನ ಸ್ನೇಹಿತರ ಬಳಗ ಆಗಮಿಸಿತ್ತು. ಈ ವೇಳೆ ವರ ಕೊರಗಜ್ಜನ ವೇಷ-ಭೂಷಣ ಧರಿಸಿ ಬಂದಿದ್ದ. ತಲೆಗೆ ಅಡಿಕೆ ಹಾಳೆ ಟೋಪಿ, ಮುಖಕ್ಕೆ ಕಪ್ಪು ಬಣ್ಣ ಹಚ್ಚಿಕೊಂಡು ಬಂದಿದ್ದ. ವರ ಹಾಗೂ ತಂಡ ವಧುವಿನ ಮನೆ ಮುಂದಿನ ರಸ್ತೆಯಲ್ಲಿ ಹಾಡು ಹೇಳಿ ಕುಣಿಯುತ್ತಾ ಬಂದಿತ್ತು. ಈ ಕೃತ್ಯದಿಂದ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗಿದೆ ಎಂದು ಹಿಂದೂ ಹಾಗೂ ಮುಸ್ಲಿಂ ಎರಡೂ ಸಮುದಾಯದವರಿಂದಲೂ ಆಕ್ರೋಶ ಹೊರಬಿದ್ದಿತ್ತು. ಅಲ್ಲದೆ ಕೃತ್ಯವನ್ನು ಖಂಡಿಸಿರುವ ಆಡಿಯೋ ಸಹ ವೈರಲ್ ಆಗಿತ್ತು.
ಇತ್ತ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ವರ ಎಸ್ಕೇಪ್ ಆಗಿದ್ದನು. ಅಲ್ಲದೆ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿ ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದನು. ಘಟನೆ ಸಂಬಂಧ ವರ ಹಾಗೂ ಆತನ ಸ್ನೇಹಿತರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ವರನಿಂದ ಅವಮಾನ!