ನವದೆಹಲಿ: ಪವಿತ್ರ ರಂಜಾನ್ ತಿಂಗಳಿನ ಉಪವಾಸವನ್ನು ಬ್ರೇಕ್ ಮಾಡಿ ವ್ಯಕ್ತಿಯೊಬ್ಬರು ಹಿಂದೂ ಯುವಕನಿಗೆ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಆರಿಫ್ ಖಾನ್ ಎಂಬವರು ಅವರು 20 ವರ್ಷದ ಅಜಯ್ ಬಿಜ್ಲಾನ್ ಗೆ ರಕ್ತದಾನ ಮಾಡಿ ಈಗ ಸುದ್ದಿಯಾಗಿದ್ದಾರೆ.
ಡೆಹ್ರಾಡೂನ್ ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ತುರ್ತು ನಿಘಾ ಘಟಕದಲ್ಲಿದ್ದ ಅಜಯ್ ಸ್ಥಿತಿ ಗಂಭೀರವಾಗಿತ್ತು. ರಕ್ತದ ಪ್ಲೇಟ್ ಲೆಟ್ ಗಳು ಸಂಖ್ಯೆ 5 ಸಾವಿರಕ್ಕೆ ಇಳಿದಿತ್ತು. ಸಾಮಾನ್ಯವಾಗಿ 1.5 ಲಕ್ಷದಿಂದ 4.5 ಲಕ್ಷದ ವರೆಗೆ ಪ್ರತಿ ಮೈಕ್ರೊ ಲೀಟರ್ ರಕ್ತಕ್ಕೆ ಪ್ಲೇಟ್ ಲೆಟ್ಗಳ ಸಂಖ್ಯೆಯಿರಬೇಕು. ಅಜಯ್ ಅವರಿಗೆ ಎ+ ಮಾದರಿಯ ರಕ್ತದ ಅವಶ್ಯಕತೆ ಇತ್ತು.
ಅಜಯ್ ತಂದೆ ಸಹಾಯವನ್ನು ಕೋರಿ ವಾಟ್ಸಪ್ ನಲ್ಲಿ ಕಳುಹಿಸಿದ್ದ ಮೆಸೇಜ್ ಅನ್ನು ಸ್ನೇಹಿತನ ಮೊಬೈಲ್ ನಲ್ಲಿ ನೋಡಿದ ಆರಿಫ್ ರಕ್ತದಾನ ಮಾಡುತ್ತೇನೆ ಎಂದು ಹೇಳಿದ್ದಾರೆ. ತಕ್ಷಣ ಆಸ್ಪತ್ರೆಗೆ ತೆರಳಿದ್ದಾರೆ. ರಕ್ತದಾನ ಮಾಡುವ ಮೊದಲು ಸ್ವಲ್ಪ ಆಹಾರವನ್ನು ಸೇವಿಸುವ ನಿಯಮವನ್ನು ವೈದ್ಯರು ಹೇಳಿದ್ದಾರೆ. ಒಂದು ಕ್ಷಣ ಯೋಚಿಸಿದ ಆರಿಫ್ ವೈದ್ಯರು ಕೊಟ್ಟ ಉಪಹಾರ ಸೇವಿಸಿ ರಕ್ತದಾನ ಮಾಡಿದ್ದಾರೆ.
ರಂಜಾನ್ ಸಮಯದಲ್ಲಿ ಸೂರ್ಯ ಹುಟ್ಟಿದಾಗಿನಿಂದ ಮುಳುಗುವವರೆಗೂ ಮುಸ್ಲಿಂ ಬಾಂಧವರು ಒಂದು ತೊಟ್ಟು ನೀರನ್ನು ಸೇವಿಸುವುದಿಲ್ಲ. ಆದರೆ ಆರಿಫ್ ಖಾನ್ ಧರ್ಮ, ಜಾತಿಗಳ ಆಚರಣೆಯನ್ನು ಮೀರಿ ಮಾನವೀಯತೆಯನ್ನು ಮೆರೆದು ಇತರರಿಗೆ ಮಾದರಿಯಾಗಿದ್ದಾರೆ.