ಜೈ ಶ್ರೀರಾಮ್ ಹೇಳದ ಮುಸ್ಲಿಂ ಬಾಲಕನಿಗೆ ಬೆಂಕಿ ಹಚ್ಚಿದ ನಾಲ್ವರು

Public TV
1 Min Read
UP POLICE

ಲಕ್ನೋ: ನಾಲ್ವರು ಅಪರಿಚಿತ ವ್ಯಕ್ತಿಗಳು 15 ವರ್ಷದ ಬಾಲಕನಿಗೆ ಬೆಂಕಿ ಹಚ್ಚಿದ್ದಾರೆ. ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಬೆಂಕಿ ಹಚ್ಚಿದ ಪರಿಣಾಮ ಬಾಲಕನ ದೇಹ ಶೇ.60ರಷ್ಟು ಸುಟ್ಟು ಹೋಗಿದ್ದು, ಕಾಶಿಯ ಕಬಿರ್ ಚೌರ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮುಸ್ಲಿಂ ಬಾಲಕ ಜೈ ಶ್ರೀರಾಮ್ ಎಂದು ಹೇಳಲು ನಿರಾಕರಿಸಿದ್ದಕ್ಕೆ ಸಿಟ್ಟುಗೊಂಡು ಆತನಿಗೆ ಬೆಂಕಿ ಹಚ್ಚಿದ್ದಾರೆ ಎಂಬುದಾಗಿ ವರದಿಯಾಗಿದೆ.

ಬಾಲಕ ಎರಡು ರೀತಿಯ ಹೇಳಿಕೆಗಳನ್ನು ನೀಡಿದ್ದಾನೆ. ಮೊದಲು ಆತ, ನಾನು ಮಹಾರಾಜ್ ಪುರ ಗ್ರಾಮಕ್ಕೆ ಓಡಿಕೊಂಡು ಹೋಗುತ್ತಿದ್ದೆ. ಈ ವೇಳೆ ಸಿಕ್ಕ ನಾಲ್ವರು ನನ್ನ ಎಳೆದುಕೊಂಡು ಹೋಗಿ ಬೆಂಕಿ ಹಚ್ಚಿದ್ದಾರೆ ಎಂದು ಹೇಳಿದ್ದಾನೆ. ಎರಡನೇಯ ಹೇಳಿಕೆಯಲ್ಲಿ ನಾಲ್ವರು ನನ್ನನ್ನಲಿ ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯ ಮಾಡಿದ್ದಾರೆ. ನಾನು ಅದನ್ನು ಹೇಳದಿದ್ದಕ್ಕೆ ನನ್ನನ್ನು ಥಳಿಸಿ ಬೆಂಕಿ ಹಚ್ಚಿದ್ದಾರೆ ಎಂದಿದ್ದಾನೆ ಅಂತ ಚಂದೌಲಿಯ ಎಸ್ ಪಿ ಸಂತೋಷ್ ಕುಮಾರ್ ಸಿಂಗ್ ಹೇಳಿದ್ದಾರೆ.

ಅಲ್ಲದೆ ಇನ್ನೊಂದೆಡೆ ನಾಲ್ವರು ಬಂದು ನನ್ನನ್ನು ಸೇತುವೆಯ ಬಳಿಯಿಂದ ಬೈಕಿನಲ್ಲಿ ಕಿಡ್ನಾಪ್ ಮಾಡಿದ್ದಾರೆ. ಅದರಲ್ಲಿ ಇಬ್ಬರು ನನ್ನ ಎರಡೂ ಕೈಗಳನ್ನು ಕಟ್ಟಿದ್ದಾರೆ. ಮೂರನೇಯವನು ನನ್ನ ಮೇಲೆ ಸೀಮೆಎಣ್ಣೆ ಸುರಿದಿದ್ದಾನೆ. ನಂತರ ನನ್ನ ಮೇಲೆ ಬೆಂಕಿ ಹಚ್ಚಿದ್ದಾರೆ. ನಂತರ ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯ ಮಾಡಿದ್ದಾರೆ ಎಂದು ಹೇಳಿದ್ದಾನೆ.

ಆದರೆ ಪೊಲೀಸರು ಮಾತ್ರ ಜೈಶ್ರೀರಾಮ್ ಹೇಳದ್ದಕ್ಕೆ ಬೆಂಕಿ ಹಚ್ಚಿದ್ದಾರೆ ಎಂಬುದನ್ನು ನಿರಾಕರಿಸಿದ್ದಾರೆ. ಸದ್ಯ ಬಾಲಕನ ಹೇಳಿಕೆಯಿಂದ ಪೊಲೀಸರೇ ಗೊಂದಲಕ್ಕೀಡಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತದೆ. ಅಲ್ಲದೆ ಬಾಲಕ ತಾನೇ ತಾನೇ ಬೆಂಕಿ ಹಚ್ಚಿಕೊಳ್ಳುತ್ತಿರುವುದನ್ನು ನೋಡಿರುವುದಾಗಿ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ ಎಂದು ಸಂತೋಷ್ ಕುಮಾರ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *