ತಿರುವನಂತಪುರಂ: ಕಳೆದ ವಾರ ಕಾರ್ ಅಪಘಾತದಲ್ಲಿ ಗಾಯಗೊಂಡಿದ್ದ ಮಲಯಾಳಂ ಸಂಗೀತ ನಿರ್ದೇಶಕ ಹಾಗೂ ವಯೋಲಿನ್ ವಾದಕ ಬಾಲಭಾಸ್ಕರ್(40) ಇಂದು ಮುಂಜಾನೆ ಮೃತಪಟ್ಟಿದ್ದಾರೆ.
ಸೆಪ್ಟೆಂಬರ್ 25 ರಂದು ತಿರುವನಂತಪುರದಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಬಾಲಭಾಸ್ಕರ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಸೋಮವಾರ ತಡರಾತ್ರಿ 1 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊಲೆಯುಸಿರೆಳೆದಿದ್ದಾರೆ.
ಅಪಘಾತದಲ್ಲಿ 2 ವರ್ಷದ ಮಗಳು ಮೃತಪಟ್ಟಿದ್ದಳು. ಪತ್ನಿ ಲಕ್ಷ್ಮಿ ಮತ್ತು ಚಾಲಕ ಅರ್ಜುನ್ ಅವರಿಗೆ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದ ವಿವರ:
15 ವರ್ಷಗಳ ಬಳಿಕ ಜನಿಸಿದ್ದ ಮಗಳಿಗಾಗಿ ಸೆಪ್ಟೆಂಬರ್ 25 ರಂದು ತ್ರಿಸೂರ್ ದೇವಾಯಲಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿ ಹಿಂದಿರುಗುತ್ತಿದ್ದರು. ಈ ವೇಳೆ ತಿರುವನಂತಪುರದ ಪಲ್ಲಿಪ್ಪುರಂ ಹೆದ್ದಾರಿಯ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರ್ ವೇಗವಾಗಿ ಹೋಗಿ ಮರಕ್ಕೆ ಹೊಡೆದಿದೆ. ತಕ್ಷಣ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಪಘಾತದ ತೀವ್ರತೆಗೆ ಎರಡು ವರ್ಷದ ಮಗಳು ಮೃತಪಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದರು.
ಅಪಘಾತದಲ್ಲಿ ಬಾಲಭಾಸ್ಕರ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಸತತ ಏಳು ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ಮಾಡಿ ಸೋಮವಾರ ತಡರಾತ್ರಿ ಮೃತಪಟ್ಟಿದ್ದಾರೆ. ಸದ್ಯಕ್ಕೆ ಅವರ ಮೃತದೇಹವನ್ನು ಅಭಿಮಾನಿಗಳ ಅಂತಿಮ ದರ್ಶನಕ್ಕಾಗಿ ತಿರುವನಂತಪುರಂ ಕಾಲೇಜಿನಲ್ಲಿ ಇರಿಸಲಾಗಿದೆ.
ಮೃತ ಬಾಲಭಾಸ್ಕರ್ ಅವರು ತಮ್ಮ 12 ವರ್ಷ ವಯಸ್ಸಿನಿಂದಲೇ ಮಲೆಯಾಳಂ ಸಿನಿಮಾಗೆ ಸಂಗೀತವನ್ನು ಸಂಯೋಜಿಸಿದ್ದರು. ಬಳಿಕ ಅನೇಕ ಸಿನಿಮಾಗಳಿಗೆ ಸಂಗೀತ ಸಂಯೋಜಿಸುವುದರ ಮೂಲಕ ಸಂಗೀತ ಕ್ಷೇತ್ರದಲ್ಲಿ ಮಿಂಚಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv