ಹುಬ್ಬಳ್ಳಿ: ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಹಾಗೂ ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳು ಹಲವು ವರ್ಷದ ನಂತರ ಭಕ್ತರೊಬ್ಬರ ಮನೆಯಲ್ಲಿ ಮುಖಾಮುಖಿಯಾಗಿ ಚರ್ಚಿಸಿರುವುದು ವಿಶೇಷವಾಗಿದೆ. ಇಬ್ಬರು ಶ್ರೀಗಳು ಸುಮಾರು ಹೊತ್ತು ಚರ್ಚೆ ಕೂಡ ನಡೆಸಿದ ಪರಿಣಾಮ ಮತ್ತೆ ಮೂರು ಸಾವಿರ ಮಠದ ಉತ್ತರಾಧಿಕಾರಿ ವಿವಾದ ಮುನ್ನೆಲೆಗೆ ಬಂದಿದೆಯಾ ಎಂಬ ಪ್ರಶ್ನೆ ಮೂಡಿದೆ.
ಶ್ರೀಮಠದ ಉತ್ತರಾಧಿಕಾರಿ ವಿವಾದ ಹಾಗೂ ಶ್ರೀಮಠದ ಜಮೀನು ಪರಭಾರೆ ವಿರುದ್ಧದ ಹೋರಾಟ ಶುರುವಾದಾಗಿನಿಂದ ಈವರೆಗೆ ಉಭಯ ಶ್ರೀಗಳು ಮುಖಾಮುಖಿ ಆಗಿರಲಿಲ್ಲ. ಒಬ್ಬರಿಗೊಬ್ಬರು ಮಾತನಾಡಿರಲಿಲ್ಲ, ದಿಂಗಾಲೇಶ್ವರ ಶ್ರೀಗಳು ಮಠಕ್ಕೆ ಹೋದರೂ ಗುರುಸಿದ್ಧ ರಾಜಯೋಗಿಂದ್ರರು ಹೊರಬಂದಿರಲಿಲ್ಲ. ಭೇಟಿ ಕೂಡ ಆಗಿರಲಿಲ್ಲ. ಉಭಯ ಶ್ರೀಗಳು ಬಹಿರಂಗವಾಗಿ ಆರೋಪ ಪ್ರತ್ಯಾರೋಪ ಮಾಡಿದ್ದ ಪ್ರಸಂಗಗಳು ನಡೆದಿದ್ದುಂಟು. ಇದೀಗ ಏಕಾಏಕಿ ಇಬ್ಬರು ಶ್ರೀಗಳು ಒಂದೆಡೆ ಕುಳಿತು ಮಾತುಕತೆ ನಡೆಸುವ ಮೂಲಕ ಅಲ್ಲಿ ಸೇರಿದ್ದ ಭಕ್ತ ಸಮೂಹದಲ್ಲಿ ಕುತೂಹಲ ಮೂಡಿಸಿದ್ದಾರೆ. ಇದನ್ನೂ ಓದಿ: ಆರ್ಎಸ್ಎಸ್ ಸದಸ್ಯನಾಗಿದ್ದ ಡಿಕೆಶಿಯವರೇ ಸಿದ್ದರಾಮಯ್ಯನವರ ಮಾತನ್ನು ಒಪ್ಪುತ್ತೀರಾ – ಬಿಜೆಪಿ ಪ್ರಶ್ನೆ
ಬಿಡ್ನಾಳದ ದಿ.ವೀರಭದ್ರಪ್ಪ ಅಸುಂಡಿ ಅವರ ಪುಣ್ಯಸ್ತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಉಭಯ ಶ್ರೀಗಳು, ಮುಖಾಮುಖಿ ಭೇಟಿಯಾಗಿ ಅಸುಂಡಿ ಅವರ ಮನೆಯಲ್ಲೇ ಒಂದಡೆ ಅಕ್ಕಪಕ್ಕ ಕುಳಿತು ಕೆಲ ಕಾಲ ಮಾತುಕತೆ ನಡೆಸಿದರು. ಅದೇ ಸಮಯಕ್ಕೆ ಶ್ರೀಮಠದ ಉನ್ನತ ಸಮಿತಿ ಸದಸ್ಯ ಸಭಾಪತಿ ಬಸವರಾಜ ಹೊರಟ್ಟಿಯವರು ಆಗಮಿಸಿದರು. ಶ್ರೀಗಳ ನಡುವಿನ ಮಾತುಕತೆಗೆ ಅಡ್ಡಿ ಮಾಡದೇ ಅವರು ಹೊರನಡೆದರು. ಆದರೆ ಶ್ರೀಗಳ ಮಾತುಕತೆ ಸಾಕಷ್ಟು ಕುತೂಹಲ ಮೂಡಿಸಿದೆ.