ಚಿತ್ರದುರ್ಗ: ಮುರುಘಾ ಶ್ರೀಗಳ ಪೊಲೀಸ್ ಕಸ್ಟಡಿ ಭಾನುವಾರಕ್ಕೆ ಅಂತ್ಯವಾಗಿದ್ದು ಜಾಮೀನು ಸಿಗುತ್ತಾ? ಅಥವಾ ನ್ಯಾಯಾಂಗ ಬಂಧನಕ್ಕೆ ಒಳಗಾಗುತ್ತಾರಾ ಎನ್ನುವುದು ಇಂದು ನಿರ್ಧಾರವಾಗಲಿದೆ.
ಲೈಂಗಿಕ ದೌರ್ಜನ್ಯ ಅಲ್ಲದೇ ಶ್ರೀಗಳ ಮೇಲೆ ಪೋಕ್ಸೋ ಕೇಸ್ ದಾಖಲಾಗಿದೆ. ಹೀಗಾಗಿ ಚಾರ್ಜ್ಶೀಟ್ ಸಲ್ಲಿಕೆಯಾಗುವವರೆಗೂ ಜಾಮೀನು ಸಿಗುವುದು ಅನುಮಾನ ಎನ್ನಲಾಗುತ್ತಿದೆ.
ಕಳೆದ 3 ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದ ಶ್ರೀಗಳನ್ನು ಇಂದು ಬೆಳಗ್ಗೆ 11 ಗಂಟೆಗೆ ಜೆಎಂಎಫ್ಸಿ ಕೋರ್ಟ್ಗೆ ಹಾಜರುಪಡಿಸಲಾಗುತ್ತದೆ. ಕಸ್ಟಡಿಗೆ ಪಡೆದ ಮೂರು ದಿನದಲ್ಲಿ ಸ್ಥಳ ಮಹಜರು ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ಪೊಲೀಸರು ಮಾಡಿದ್ದಾರೆ. ಇದನ್ನೂ ಓದಿ: ಮುರುಘಾ ಶ್ರೀ ಬಂಧನದ ಬೆನ್ನಲ್ಲೇ ಪ್ರಶಸ್ತಿ ವಾಪಸ್ ಅಭಿಯಾನ!
ಇಂದು ಶ್ರೀಗಳ ಪರ ವಕೀಲರು ಜಾಮೀನು ನೀಡುವಂತೆ ನ್ಯಾಯಾಧೀಶರ ಮುಂದೆ ಮನವಿ ಮಾಡಲಿದ್ದಾರೆ. ಅಲ್ಲದೇ ಆರೋಗ್ಯದ ಪರಿಸ್ಥಿತಿ ಸರಿಯಿಲ್ಲದ ಕಾರಣ ಬೆಂಗಳೂರಿನ ಜಯದೇವ ಇಲ್ಲ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲು ಅನುಮತಿಯನ್ನು ಕೂಡ ಕೇಳಲಿದ್ದಾರೆ.
ನ್ಯಾಯಾಲಯದಲ್ಲಿ ಶ್ರೀಗಳ ಜಾಮೀನು ಅರ್ಜಿ ಹಾಗೂ ಚಿಕಿತ್ಸೆಗೆ ಬೇರೆ ಕಡೆ ಹೋಗಲು ಅನುಮತಿಯನ್ನು ಪಡೆಯಲು ಮತ್ತೆ ಮನವಿ ಸಲ್ಲಿಸಲಾಗುತ್ತದೆ. ಇದಕ್ಕೆ ನ್ಯಾಯಾಧೀಶರು ಒಪ್ಪುತ್ತಾರಾ ಇಲ್ವಾ ಎಂಬುದು ಕುತೂಹಲವಾಗಿದೆ. ಜಾಮೀನು ಅರ್ಜಿ, ಚಿಕಿತ್ಸೆಗೆ ಮನವಿ ಅರ್ಜಿಯನ್ನು ನ್ಯಾಯಾಧೀಶರು ತಿರಸ್ಕರಿಸಿದರೆ ಮುರುಘಾ ಶರಣರಿಗೆ ಜೈಲುವಾಸ ಪಕ್ಕಾ ಆಗಲಿದೆ.
ಜಾಮೀನು ಸಿಗುವುದು ಕಷ್ಟ:
ಈವರೆಗೆ ದಾಖಲಾದ ಪೋಕ್ಸೋ ಕೇಸ್ಗಳಲ್ಲಿ ಅಷ್ಟು ಸುಲಭವಾಗಿ ಜಾಮೀನು ಸಿಕ್ಕಿಲ್ಲ. ಹೀಗಾಗಿ ಶ್ರೀಗಳಿಗೂ ಜಾಮೀನು ಸಿಗೋದು ಬಹುತೇಕ ಕಷ್ಟ ಎನ್ನಲಾಗುತ್ತದೆ. ಆದರೆ ಅನಾರೋಗ್ಯ ಕಾರಣವನ್ನು ಜಡ್ಜ್ ಒಪ್ಪಿದರೆ ಜಾಮೀನು ಸಿಗುವ ಸಾಧ್ಯತೆಯಿದೆ.
ಪೋಕ್ಸೋ ಕೇಸ್ನಲ್ಲಿ ಆರೋಪ ಸಾಬೀತಾದ್ರೆ 16 ವರ್ಷ ಒಳಗಿನ ಮಕ್ಕಳ ಮೇಲೆ ದೌರ್ಜನ್ಯ ಎಸಗಿದ್ರೆ ಕನಿಷ್ಠ 20 ವರ್ಷ ಜೈಲುವಾಸವಾದರೆ ಗರಿಷ್ಠ ಜೀವಾವಧಿ ಶಿಕ್ಷೆ ಇದೆ. 16 ರಿಂದ 18 ವರ್ಷ ಒಳಗಿನ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಕನಿಷ್ಟ 10 ವರ್ಷ ಜೈಲು ಶಿಕ್ಷೆ, ಗರಿಷ್ಟ ಜೀವಾವಧಿ ಶಿಕ್ಷೆಯನ್ನು ಶಿಕ್ಷೆ ಇದೆ.