ರಾಯಚೂರು: ಅಕ್ರಮ ಮರಳು ಸಾಗಿಸುವ ಲಾರಿಯನ್ನು ತಡೆಯಲು ಬಂದ ಅಧಿಕಾರಿಯೊಬ್ಬರ ಮೇಲೆ ಮರಳು ತುಂಬಿದ್ದ ಲಾರಿಯನ್ನೇ ಹರಿಸಿ ಹತ್ಯೆಗೈದಿದ್ದ ಚಾಲಕನ ವಿರುದ್ಧ ಕೊಲೆ ಪ್ರಕರಣ ದಾಖಸಿ, ಪೊಲೀಸರು ಬಂಧಿಸಿದ್ದಾರೆ.
ರಂಗಪ್ಪ ಎಂಬಾತ ಬಂಧಿತ ಲಾರಿ ಚಾಲಕ. ಸಾಹೇಬ್ ಪಟೇಲ್(45) ಮೃತ ಗ್ರಾಮ ಲೆಕ್ಕಾಧಿಕಾರಿ. ರಾಯಚೂರಿನ ಮಾನ್ವಿಯ ಬುದ್ದಿನ್ನಿಯಲ್ಲಿ ಶನಿವಾರ ನಡೆದ ಘಟನೆ ಇದಾಗಿದ್ದು, ಶರಣಯ್ಯಗೌಡ ಎಂಬವನಿಗೆ ಸೇರಿದ ಲಾರಿಯ ಚಾಲಕನ ವಿರುದ್ಧ ಗ್ರಾಮಲೆಕ್ಕಾಧಿಕಾರಿ ಇಫ್ರಾನ್ ಅಲಿ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಸೆಕ್ಷನ್ 302(ಕೊಲೆ) ಅಡಿಯಲ್ಲಿ ಪೋಲೀಸರು ಪ್ರಕರಣ ದಾಖಲಿಸಿ, ರಂಗಪ್ಪನನ್ನು ಮಾನ್ವಿ ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ:
ಸಾಹೇಬ್ ಪಟೇಲ್ ಅವರು ಚೀಕಪರ್ವಿಯಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮಾನ್ವಿಯ ಬುದ್ದಿನ್ನಿ ಸಮೀಪದ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆ ಎನ್ನುವ ಮಾಹಿತಿ ಪಡೆಡಿದ್ದ ಅವರು ಪರಿಶೀಲನೆ ನಡೆಸಲು ಹೋಗಿದ್ದರು. ಈ ವೇಳೆ ಚಾಲಕ ತಪ್ಪಿಸಿಕೊಳ್ಳಲು ಸಾಹೇಬ್ ಪಟೇಲ್ ಅವರ ಕಾಲುಗಳ ಮೇಲೆ ಲಾರಿ ಹರಿಸಿದ್ದಾನೆ. ಪರಿಣಾಮ ಎರಡೂ ಕಾಲು ಕಳೆದುಕೊಂಡು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮಾನ್ವಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಪಟೇಲ್ ರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾಹೇಬ್ ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮಲೆಕ್ಕಾಧಿಕಾರಿ ಸಾಹೇಬ್ ಪಟೇಲ್ ಮೃತ ದೇಹವನ್ನು ಇಂದು ಸ್ವಗ್ರಾಮ ಲಿಂಗಸುಗೂರಿನ ಚಿತ್ತಾಪುರಕ್ಕೆ ರವಾನಿಸಲಾಗಿದ್ದು, ಕುಟುಂಬಸ್ಥರ ಅಂತಿಮ ಸಂಸ್ಕಾರ ನಡೆಸಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv