ರಾಯಚೂರು: ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿ ಗಾಯಗೊಳಿಸಿ ಪರಾರಿಯಾಗಿದ್ದ ಕೊಲೆ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ.
ಆಗಸ್ಟ್ 16 ರಂದು ರಾಯಚೂರಿನ ಮಾನ್ವಿ ತಾಲೂಕಿನ ಅಮೀನಗಡ ಗ್ರಾಮದಲ್ಲಿ ವಿಚಾರಣೆಗೆ ಕರೆತಂದ ವೇಳೆ ಈ ಘಟನೆ ನಡೆದಿತ್ತು. ಪೊಲೀಸರಿಗೆ ಕಲ್ಲು ತೂರಿ ಸಜ್ಜೆ ಹೊಲದಲ್ಲಿ ಆರೋಪಿ ಹುಚ್ಚಪ್ಪ ಪರಾರಿಯಾಗಿದ್ದ. ಮಾನ್ವಿ ಸಿಪಿಐ ಚಂದ್ರಶೇಕರ್ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಹೆದರಿಸಿದರೂ ಆರೋಪಿ ಓಡಿಹೋಗಿದ್ದ. ಇದೀಗ ಹುಚ್ಚಪ್ಪನನ್ನ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆ.12 ರಂದು ಗ್ರಾಮದಲ್ಲಿ ವೃದ್ಧೆ ಹುಲಿಗೆಮ್ಮ ಕೊಲೆಯಾಗಿತ್ತು. ಹುಚ್ಚಪ್ಪನನ್ನು ಸಂಶಯದ ಮೇಲೆ ಕವಿತಾಳ ಪೊಲೀಸರು ಬಂಧಿಸಿದ್ದರು. ವಿಚಾರಣೆಗಾಗಿ ಅಮೀನಗಡಕ್ಕೆ ಕರೆದೊಯ್ದಾಗ ಘಟನೆ ನಡೆದಿತ್ತು. ಆಸ್ತಿಗಾಗಿ ತನ್ನ ದೊಡ್ಡಮ್ಮಳನ್ನ ಕೊಲೆ ಮಾಡಿರುವುದಾಗಿ ಆರೋಪಿ ಹುಚ್ಚಪ್ಪ ಬಾಯಿಬಿಟ್ಟಿದ್ದಾನೆ. ಆರೋಪಿಯಿಂದ 20 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.