ಕೋರ್ಟ್‌ ಆವರಣದಲ್ಲೇ ಭೀಕರ ಗುಂಡಿನ ದಾಳಿ – ವಿಚಾರಣಾಧೀನ ಕೈದಿಯ ಹತ್ಯೆ, ಇಬ್ಬರು ಅರೆಸ್ಟ್‌

Public TV
1 Min Read

ಪಾಟ್ನಾ: ವಿಚಾರಣಾಧೀನ ಕೈದಿಯೊಬ್ಬನನ್ನ ಕೋರ್ಟ್ ಆವರಣದಲ್ಲೇ ಗುಂಡಿಕ್ಕಿ ಕೊಂದಿರುವ ಘಟನೆ ಪಾಟ್ನಾದಲ್ಲಿ (Patna) ನಡೆದಿದೆ.

ಪಾಟ್ನಾದ ದಾನಪುರ ಕೋರ್ಟ್ ಕ್ಯಾಂಪಸ್​ನಲ್ಲಿ ಬೇರ್​ ಜೈಲಿನಿಂದ ವಿಚಾರಣೆಗೆ ಕರೆತಂದಿದ್ದ ಕೈದಿಯನ್ನ ಪೊಲೀಸರ ಎದುರಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪ್ರಾಥಮಿಕ ಮಾಹಿತಿಯಲ್ಲಿ ಕೊಲೆಯಾದ ವ್ಯಕ್ತಿಯನ್ನ ಅಭಿಷೇಕ್ ಕುಮಾರ್ ಅಲಿಯಾಸ್ ಛೋಟೆ ಸರ್ಕಾರ್ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸೆಕ್ಸ್‌ಗೆ ನಿರಾಕರಿಸಿದ ಲಿವ್-ಇನ್-ಪಾರ್ಟ್ನರ್‌ನ ಕುತ್ತಿಗೆಗೆ ಕತ್ತರಿಯಿಂದ ಇರಿದ!

Patna Court

ಛೋಟೆ ಸರ್ಕಾರ್ ಸಿಕಂದರ್‌ಪುರದ ನಿವಾಸಿಯಾಗಿದ್ದು ಕೊಲೆ ಪ್ರಕರಣದ ಆರೋಪ ಎದುರಿಸುತ್ತಿದ್ದ. ಆತನನ್ನು ನಗರದ ಬೇರ್‌ ಜೈಲಿನಲ್ಲಿ ಇರಿಸಲಾಗಿದ್ದು, ಇಂದು ಕೋರ್ಟ್‌ಗೆ ಹಾಜರುಪರಿಸಲು ಕರೆತರಲಾಗುತ್ತಿತ್ತು. ವಿಚಾರಣಾಧೀನ ಕೈದಿಯಾಗಿದ್ದ ಛೋಟೆ ಸರ್ಕಾರ್‌ನನ್ನು ದಾನಪುರ ನ್ಯಾಯಾಲಯಕ್ಕೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಇಬ್ಬರು ದುಷ್ಕರ್ಮಿಗಳು ಆತನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಂಸತ್ ಮೇಲಿನ ದಾಳಿಯ ಪ್ರಮುಖ ರೂವಾರಿ ಲಲಿತ್ ಝಾ 7 ದಿನ ಪೊಲೀಸ್ ಕಸ್ಟಡಿಗೆ

ಸದ್ಯ ವಿಚಾರಣಾಧೀನ ಕೈದಿಯನ್ನ ಹತ್ಯೆ ಮಾಡಿದ ಇಬ್ಬರು ಆರೋಪಿಗಳನ್ನ ಬಂಧಿಸಿ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿದೆ. ಅವರನ್ನು ಯಾರು ಕಳುಹಿಸಿದ್ದಾರೆ, ಈ ಕೊಲೆಯ ಹಿಂದಿನ ಉದ್ದೇಶವೇನು ಅನ್ನೋ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಪಾಟ್ನಾ ಪೊಲೀಸ್‌ ವರಿಷ್ಠಾಧಿಕಾರಿ ರಾಜೇಶ್‌ ಕುಮಾರ್‌ ತಿಳಿಸಿದ್ದಾರೆ.

ದಾಳಿಕೋರರು ಮುಜಾಫರ್‌ಪುರದವರು ಎಂದು ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ಆರೋಪಿಗಳ ಬಳಿಯಿದ್ದ 4 ಬುಲೆಟ್‌ ಶೆಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದ್ರೆ ಎಷ್ಟು ಬುಲೆಟ್‌ಗಳನ್ನ ಹಾರಿಸಲಾಗಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.

Share This Article