ಕೋಲಾರ: ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಮಾನ ಮರ್ಯಾದೆ ಇದ್ದರೆ ಅವರು ಕಾಂಗ್ರೆಸ್ ಕಚೇರಿಗೆ ಕಾಲಿಡಬಾರದು ಎಂದು ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು. ಅವರಿಗೆಲ್ಲಾ ಮಾನ ಮರ್ಯಾದೆ ಇದ್ದರೆ ಕಾಂಗ್ರೆಸ್ ಪಕ್ಷದ ಕಚೇರಿಗೆ ಕಾಲಿಡಬಾರದು. ಇದನ್ನು ನಾನು ಗಂಭಿರವಾಗಿಯೇ ಪರಿಗಣಿಸಿ ಹೇಳುತ್ತಿದ್ದೇನೆ ಎಂದು ಕಿಡಿಕಾರಿದರು.
ಕಾಂಗ್ರೆಸ್ಸಿನಲ್ಲಿ ಇದ್ದುಕೊಂಡೆ ಬಿಜೆಪಿಗೆ ಬೆಂಬಲಿಸಿದವರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಿದ್ದೇನೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶಾಸಕರಾದ ನಾರಾಯಣಸ್ವಾಮಿ, ವಿ. ಮುನಿಯಪ್ಪ, ಎಚ್.ನಾಗೇಶ್, ನಜೀರ್ ಅಹ್ಮದ್ ವಿರುದ್ಧ ಹೈ ಕಮಾಂಡ್ಗೆ ದೂರು ನೀಡಲಾಗಿದೆ. ಅದರಂತೆ ಇಂದಿನ ಸತ್ಯ ಶೋಧನ ಸಮಿತಿಗೂ ದೂರು ನೀಡಿದ್ದೇನೆ ಎಂದು ತಿಳಿಸಿದರು.
ಕಾಂಗ್ರೆಸ್ಸಿಗೆ ದ್ರೋಹ ಮಾಡಿದ ಜನ ಪಕ್ಷಕ್ಕೆ ಬೇಡ. ಮೈತ್ರಿ ಸರ್ಕಾರ ರಚಿಸಲು ಜನತಾ ದಳ ಕೂಡ ನಮ್ಮ ಜೊತೆ ನಿಂತರು, ಆದರೆ ಎರಡು ಪಕ್ಷದ ಕಾರ್ಯಕರ್ತರು ಒಂದಾಗಲಿಲ್ಲ. ಇದರ ಪರಿಣಾಮವಾಗಿ ಎಂದಿಗೂ ಸಂಸತ್ತಿನಲ್ಲಿ ಇಲ್ಲದ ಪರಿಸ್ಥಿತಿಯನ್ನು ಇಂದು ನೋಡಬೇಕಾಗಿದೆ. ಅದರಲ್ಲೂ ಕಾಂಗ್ರೆಸ್ ಪಕ್ಷದ ಶಾಸಕರು, ನಾಯಕರು ಮಾಡಿರುವ ತಪ್ಪು ಕೆಲಸಕ್ಕೆ ಕ್ರಮ ಕೈಗೊಳ್ಳಲೇಬೇಕು. ಅದು ಪಕ್ಷದ ಜವಾಬ್ದಾರಿ, ಶಿಸ್ತಿನ ಸಿಪಾಯಿಗಳಂತೆ ನಮಗೆ ಬೆಂಬಲಿಸಿದ ಜನರಿಗೆ ನಾವು ಗೌರವ ನೀಡಬೇಕು. ಮತ್ತೆ ಕಾಂಗ್ರೆಸ್ಸನ್ನು ನಾವು ಕಟ್ಟಬೇಕಿದೆ ಎಂದು ಹೇಳಿದರು.