ಮಂಡ್ಯ: ಹಿಂದೂ ಸ್ಮಶಾನದ ಜಾಗದಲ್ಲಿ ಕಸ ಸುರಿದು ಗಲೀಜು ಮಾಡುತ್ತಿದ್ದಾರೆ ಎಂದು ಪುರಸಭೆ ವಾಹನಗಳ ಮುಂದೆ ಮಲಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿ ನಡೆದಿದೆ.
ಕೆಆರ್ ಪೇಟೆ ವ್ಯಾಪ್ತಿಯ ಸರ್ವೆ ನಂಬರ್ 362 ರ ಜಾಗವನ್ನು ಸ್ಮಶಾನಕ್ಕೆಂದು ನಿಗದಿ ಪಡಿಸಲಾಗಿದೆ. ಆದರೆ ಪುರಸಭೆ ಅಧಿಕಾರಿಗಳು ನಿರಂತರವಾಗಿ ಸ್ಮಶಾನದ ಜಾಗದಲ್ಲಿ ಪಟ್ಟಣದ ಕಸವನ್ನು ತಂದು ಸುರಿಸುತ್ತಿದ್ದಾರೆ. ಇದ್ರಿಂದ ಸ್ಮಶಾನ ಸಂಪೂರ್ಣ ಗಲೀಜಾಗಿದ್ದು ಅಂತ್ಯ ಸಂಸ್ಕಾರ ಮಾಡಲು ಕಷ್ಟವಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಅಷ್ಟೇ ಅಲ್ಲದೆ ಸ್ಮಶಾನಕ್ಕೆ ಕಸ ಸುರಿಯಲು ಬಂದ ಪುರಸಭೆ ವಾಹನಗಳ ಮುಂದೆ ಮಲಗಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗೆ ಹೆದರಿದ ಪುರಸಭೆ ನೌಕರರು ಕಸದ ಸಮೇತ ವಾಹನ ತೆಗೆದುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಮತ್ತೆ ಸ್ಮಶಾನದಲ್ಲಿ ಕಸ ಸುರಿದರೆ ಉಗ್ರ ಹೋರಾಟ ನಡೆಸೋದಾಗಿ ಪ್ರತಿಭಟನಾನಿರತರು ಎಚ್ಚರಿಕೆ ನೀಡಿದ್ದಾರೆ.