ರಾಯಚೂರು: ಕಳೆದ 19 ವರ್ಷಗಳಿಂದ ಕಾರಹುಣ್ಣಿಮೆ ಹಿನ್ನೆಲೆ ಪ್ರತೀವರ್ಷ ರಾಯಚೂರಿನಲ್ಲಿ ವಿಜೃಂಭಣೆಯಿಂದ ಮುಂಗಾರು ಸಾಂಸ್ಕೃತಿಕ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ ಈ ಬಾರಿ ಕೂಡ ಮುಂಗಾರು ಹಬ್ಬಕ್ಕೆ ರಾಯಚೂರು ಮಂದಿ ಅದ್ಧೂರಿ ಚಾಲನೆ ಕೊಟ್ಟು ಆಚರಿಸುತ್ತಿದ್ದಾರೆ.
ನಗರದ ರಾಜೇಂದ್ರ ಗಂಜ್ ನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಮುಂಗಾರು ಸಾಂಸ್ಕೃತಿಕ ಹಬ್ಬ ನಡೆಯಲಿದೆ. ಈ ವಿಶೇಷ ಹಬ್ಬಕ್ಕೆ ಸೋಮವಾರಪೇಟೆ ಮಠದ ಶ್ರೀಗಳು ಹಾಗೂ ರಾಯಚೂರು ಸಂಸದ ಅಮರೇಶ್ವರ್ ನಾಯಕ್ ಚಾಲನೆ ನೀಡಿದರು.
300 ಕಾಪು ಸಮಾಜದವರು ಹಬ್ಬವನ್ನ ಆಯೋಜನೆ ಮಾಡುತ್ತಿದ್ದು, ಅವರ ಕುಲದೇವತೆ ಲಕ್ಷ್ಮಮ್ಮ ದೇವಿ ಮೆರವಣಿಗೆಯನ್ನ ನಾಳೆ ನಗರದಲ್ಲಿ ಅದ್ಧೂರಿಯಾಗಿ ನಡೆಸಲಿದ್ದಾರೆ. ಕಾರಹಣ್ಣಿಮೆ ಹಿನ್ನೆಲೆ ಮುಂಗಾರು ಹೊಸ್ತಿಲಲ್ಲಿ ರೈತರಲ್ಲಿ ಕೃಷಿ ಚಟುವಟಿಕೆಗೆ ಪ್ರೋತ್ಸಾಹ ನೀಡಲು ಈ ಸಾಂಸ್ಕೃತಿಕ ಹಬ್ಬವನ್ನ ಆಚರಿಸಲಾಗುತ್ತಿದೆ.
ಅಲ್ಲದೆ ವಿವಿಧ ರಾಜ್ಯಗಳಿಂದ ಆಗಮಿಸಿದ ಬೃಹದಾಕಾರದ ಜೋಡಿ ಎತ್ತುಗಳ ಭಾರ ಎಳೆಯುವ ಸ್ಪರ್ಧೆ, ಕುಸ್ತಿ, ಕಲ್ಲು ಎತ್ತುವ ಸ್ಪರ್ಧೆ ಸೇರಿದಂತೆ ವಿವಿಧ ಜಾನಪದ ಕ್ರೀಡೆಗಳು ಮುಂಗಾರು ಹಬ್ಬದಲ್ಲಿ ನಡೆಯಲಿದ್ದು, ಈ ಸ್ಪರ್ಧೆಗಳು ಹಬ್ಬದ ಪ್ರಮುಖ ಆಕರ್ಷಣೆಯಾಗಿದೆ. ಹಾಗೆಯೇ ಹಬ್ಬ ನಡೆಯುವ ಮೂರು ದಿನಗಳು ಕೂಡ ಸಂಜೆ ವಿವಿಧ ರಾಜ್ಯಗಳ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಮನರಂಜಿಸಲಿದೆ.
ಅಷೇ ಅಲ್ಲದೆ ಈ ವಿಶೇಷ ಹಬ್ಬದಲ್ಲಿ ರಾಯಚೂರು ಸಂಸದ ಅಮರೇಶ್ವರ್ ನಾಯಕ್ ಅವರ ಜನ್ಮದಿನ ಇದ್ದಿದ್ದರಿಂದ ಕಾರ್ಯಕ್ರಮ ಆಯೋಜಕರು ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದರು.