ಕಣಜ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಆದಿತ್ಯ ನಾಯಕರಾಗಿ ನಟಿಸುತ್ತಿರುವ ‘ಮುಂದುವರೆದ ಅಧ್ಯಾಯ’ ಚಿತ್ರಕ್ಕೆ ಕಂಠೀರವ ಸ್ಟುಡಿಯೋದಲ್ಲಿ ಕ್ಲೈಮ್ಯಾಕ್ಸ್ ಭಾಗ ಚಿತ್ರಿಸಿಕೊಳ್ಳುವುದರೊಂದಿಗೆ ಚಿತ್ರೀಕರಣ ಮುಕ್ತಾಯಗೊಂಡಿದೆ.
ಆದಿತ್ಯ, ಆಶಿಕ, ಸಂದೀಪ್ ಕುಮಾರ್, ಚಂದನ ಹಾಗೂ ಟಿ ವಿ ಕಾರ್ಯಕ್ರಮ ನಿರೂಪಕರಾದ ಭಾವನ, ನಾಗೇಂದ್ರಬಾಬು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಕಂಠೀರವ ಸ್ಟುಡಿಯೋದಲ್ಲಿರುವ ರೆಬಲ್ಸ್ಟಾರ್ ಅಂಬರೀಶ್ ಅವರ ಸಮಾಧಿಗೆ ತೆರಳಿ ಆಶೀರ್ವಾದ ಪಡೆದ ನಂತರ ಕುಂಬಳಕಾಯಿ ಒಡೆಯುವುದರೊಂದಿಗೆ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ಚಿತ್ರಕ್ಕೆ 50 ದಿನಗಳ ಕಾಲ ಬೆಂಗಳೂರು, ದೇವರಾಯನದುರ್ಗ, ಮಳವಳ್ಳಿ, ಮಾಗಡಿ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.
ವಿಭಿನ್ನ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಬಾಲು ಚಂದ್ರಶೇಖರ್ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಜಾನಿ-ನಿತಿನ್ ಸಂಗೀತ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಜಯಂತ ಕಾಯ್ಕಿಣಿ ಬರೆದಿದ್ದಾರೆ. ಅನೂಪ್ ಸೀಳಿನ್ ಹಿನ್ನಲೆ ಸಂಗೀತ ನೀಡಿದ್ದಾರೆ. ದಿಲೀಪ್ ಚಕ್ರವರ್ತಿ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ ಹಾಗೂ ವಿನೋದ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಆದಿತ್ಯ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಅಜೇಯ್ ರಾವ್, ಸಂದೀಪ್ ಕುಮಾರ್, ಆಶಿಕಾ ಸೋಮಶೇಖರ್, ಚಂದನ, ಮುಖ್ಯಮಂತ್ರಿ ಚಂದ್ರು, ಜೈಜಗದೀಶ್, ಭಾಸ್ಕರ್ ಸೂರ್ಯ, ವಿನೋದ್, ಶಕ್ತಿ ಸೋಮಣ್ಣ ಮುಂತಾದವರಿದ್ದಾರೆ.