ಮುಂಬೈ: ಸ್ನೇಹಿತರಿಬ್ಬರ ಜೊತೆ ಸೇರಿ ಮಹಿಳೆಯೊಬ್ಬಳು 30 ವರ್ಷದ ಯುವಕನ ಮರ್ಮಾಂಗವನ್ನೇ ಕತ್ತರಿಸಿದ ಘಟನೆ ಮುಂಬೈ ಸಮೀಪದ ಡೊಂಬಿವಿಲಿಯಲ್ಲಿ ನಡೆದಿದೆ.
ಡೊಂಬಿವಿಲಿಯ ನಂದಿವಳಿ ನಿವಾಸಿ ಆರೋಪಿ ಮಹಿಳೆ ಹಾಗೂ ಕೃತ್ಯಕ್ಕೆ ಸಹಾಯ ಮಾಡಿದ್ದ ಮುಕೇಶ್ ಕನಿಯಾ, ತೇಜಸ್ ಮಹಾತ್ರೆಯನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೆ ಒಳಗಾದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಸಮೀಪದ ಏಮ್ಸ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಘಟನೆಯ ವಿವರ:
ಹಲ್ಲೆಗೆ ಒಳಗಾದ ಯುವಕನು ಆರೋಪಿ ಮಹಿಳೆಗೆ ಕಿರುಕುಳ ನೀಡುತ್ತಿದ್ದ. ಇದರಿಂದ ಕೋಪಗೊಂಡ ಮಹಿಳೆ ಆತನಿಗೆ ಪಾಠ ಕಲಿಸಬೇಕು ಅಂತ ನಿರ್ಧರಿಸಿದ್ದಳು. ಇದಕ್ಕೆ ಇಬ್ಬರ ವ್ಯಕ್ತಿಗಳ ಸಹಾಯ ಪಡೆದು, ಪ್ಲಾನ್ ರೂಪಿಸಿದ್ದಳು. ಆಕೆಯ ಸಲಹೆಯಂತೆ ಇಬ್ಬರು ರೈಲ್ವೇ ಟ್ರ್ಯಾಕ್ ಸಮೀಪದ ನಿರ್ಜನ ಪ್ರದೇಶದಲ್ಲಿ ಸೇರಿದ್ದರು. ಇತ್ತ ಮಹಿಳೆ ಕಿರುಕುಳ ನೀಡುತ್ತಿದ್ದ ಯುವಕನ ಜೊತೆಗೆ ಮಾತನಾಡುತ್ತಾ ನಿರ್ಜನ ಪ್ರದೇಶಕ್ಕೆ ಬಂದಿದ್ದಳು. ತಕ್ಷಣವೇ ಮೂವರು ಸೇರಿ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಆತನ ಮರ್ಮಾಂಗವನ್ನು ಮಹಿಳೆ ಕತ್ತರಿಸಿದ್ದಾಳೆ. ಇದನ್ನು ನೋಡಿ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿ, ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಠಾಣೆಗೆ ಕರೆದುಕೊಂಡು ಬಂದು ವಿಚಾರಣೆಗೆ ಒಳಪಡಿಸಿದಾಗ, ವ್ಯಕ್ತಿ ನನಗೆ ಕಿರುಕುಳ ನೀಡುತ್ತಿದ್ದ. ಹೀಗಾಗಿ ಅವನಿಗೆ ಪಾಠ ಕಲಿಸಲು ಕೃತ್ಯ ಎಸಗಿದ್ದೇನೆ ಎಂದು ಮಹಿಳೆ ತಪ್ಪನ್ನು ಒಪ್ಪಿಕೊಂಡಿದ್ದಾಳೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv