ಮುಂಬೈ: ಸಿಕ್ಕಾಪಟ್ಟೇ ಪ್ರಚಾರ ಪಡೆದಿರುವ ಡ್ರಗ್ಸ್ ಪ್ರಕರಣದಲ್ಲಿ ನಟ ಶಾರೂಖ್ ಖಾನ್ ಮಗ ಆರ್ಯನ್ ಖಾನ್ ಬಂಧನಕ್ಕೆ ಈಗ ಸ್ಫೋಟಕ ತಿರುವು ಸಿಕ್ಕಿದೆ. ಐಷಾರಾಮಿ ಹಡಗಿನ ಮೇಲೆ ದಾಳಿಯಲ್ಲಿ ಬಿಜೆಪಿ ಕೈವಾಡ ಇದೆ ಎಂದು ಆರೋಪಿಸಿರುವ ಆಡಳಿತ ಪಕ್ಷ NCP(ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ) ಆ ಸಂಬಂಧ ಸ್ಫೋಟಕ ವೀಡಿಯೋ, ಫೋಟೋಗಳನ್ನು ಬಿಡುಗಡೆ ಮಾಡಿದೆ.
ಹಡಗಿನ ಮೇಲೆ ಎನ್ಸಿಬಿ(NCB) ದಾಳಿ ಮಾಡುವುದಕ್ಕೂ ಮೊದಲು ಬಿಜೆಪಿ ಉಪಾಧ್ಯಕ್ಷ ಮನೀಶ್ ಭಾನುಶಾಲಿ ಮತ್ತು ವಂಚನೆ ಕೇಸ್ವೊಂದರಲ್ಲಿ ಆರೋಪಿ ಆಗಿದ್ದ ಎಸ್.ಕೆ ಗೋಸಾವಿ ಮುಂಬೈನಲ್ಲಿರುವ ಎನ್ಸಿಬಿ ಕಚೇರಿಗೆ ಬಂದಿದ್ದರು. ದಾಳಿ ಬಳಿಕ ಆರ್ಯನ್ ಖಾನ್, ಆತನ ಸ್ನೇಹಿತ ಅರ್ಬಾಜ್ ಮರ್ಚೆಂಟ್ನನ್ನು ಇದೇ ಮನೀಶ್ ಮತ್ತು ಗೋಸಾವಿ ಎನ್ಸಿಬಿ ಕಚೇರಿಗೆ ಎಳೆದುಕೊಂಡು ಬಂದಿದ್ದರು. ದಾಳಿ ವೇಳೆ ಸಿಕ್ಕಿದೆ ಎಂದು ಎನ್ಸಿಬಿ ತೋರಿಸಿರುವ ಮಾದಕ ದ್ರವ್ಯ ಮತ್ತು ಹಣದ ಫೋಟೋ ಹಡಗಿನಲ್ಲಿ ಸಿಕ್ಕಿದ್ದಲ್ಲ, ಬದಲಿಗೆ ಎನ್ಸಿಬಿ ನಿರ್ದೇಶಕರ ಕಚೇರಿಯಲ್ಲಿ ತೆಗೆದಿದ್ದು. ಶಾರುಖ್ ಖಾನ್ ಮಗನ ಮೇಲೆ ಎನ್ಸಿಬಿ ಡ್ರಗ್ಸ್ ದಾಳಿ ಮಾಡಲಿದೆ ಎಂದು ತಿಂಗಳಿಂದಲೇ ವಾಟ್ಸಪ್ಗಳಲ್ಲಿ ಹರಿದಾಡಿತ್ತು ಎಂದು ನವಾಬ್ ಮಲಿಕ್ ಹೇಳಿದ್ದಾರೆ. ಇದನ್ನೂ ಓದಿ: ಶಾರುಖ್ ಖಾನ್ ಪುತ್ರನ ಬಂಧನ- ರಮ್ಯಾಗೆ ಅನುಮಾನ
ಮನೀಶ್ ಭಾನುಶಾಲಿ ಮತ್ತು ಎಸ್ಕೆ ಗೋಸಾವಿ ಇಬ್ಬರು ಮಾಹಿತಿ ನೀಡಿದ್ದರು ಎಂದು ಎನ್ಸಿಬಿ ಹೇಳಿದೆಯಾದರೂ ಆರೋಪಿಗಳನ್ನು ವಶಕ್ಕೆ ಪಡೆದ ಬಳಿಕ ಎನ್ಸಿಬಿ ಅಧಿಕಾರಿಗಳು ಕರೆತರುವ ಬದಲು ಇವರಿಬ್ಬರು ಕರೆತಂದಿದ್ದು ಯಾಕೆ..?. ಎನ್ಸಿಬಿ ವಶದಲ್ಲಿದ್ದಾಗ ಖಾಸಗಿ ವ್ಯಕ್ತಿ ಆಗಿರುವ ಗೋಸಾವಿ ಆರ್ಯನ್ ಖಾನ್ ಜೊತೆಗೆ ಹೇಗೆ ಫೋಟೋ ತೆಗೆಸಿಕೊಂಡ ಎಂಬ ಪ್ರಶ್ನೆ ಎದ್ದಿದೆ. ವಿಚಾರಣೆ ವೇಳೆ ‘ಆರ್ಯನ್ ಖಾನ್ ಬಳಿಕ ಮಾದಕ ದ್ರವ್ಯ ಪತ್ತೆ ಆಗಿಲ್ಲ’ ಎಂದು ಎನ್ಸಿಬಿ ಕೋರ್ಟಿಗೆ ಮಾಹಿತಿ ನೀಡಿತ್ತು. ಇದನ್ನೂ ಓದಿ: ಕಿಂಗ್ ಖಾನ್ ಮಗನ ಡ್ರಗ್ಸ್ ಪ್ರಕರಣದಲ್ಲಿ ಕನ್ನಡಿಗನ ವಕಾಲತ್ತು
ಇತ್ತ ಹಡಗಿನಲ್ಲಿ ಎನ್ಸಿಬಿ ಮಾದಕ ದ್ರವ್ಯಗಳನ್ನಿಟ್ಟು ನಮ್ಮ ವಿರುದ್ಧ ಸಂಚು ರೂಪಿಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಿರುವ ಆರ್ಯನ್ ಗೆಳೆಯ ಅರ್ಬಜ್ ಮರ್ಚೆಂಟ್ ಹಡಗಿನ ಸಿಸಿಟಿವಿ ದಶ್ಯ ನೀಡುವಂತೆ ಕೋರಿ ಕೋರ್ಟ್ ಮೊರೆ ಹೋಗಿದ್ದಾನೆ. ಆರ್ಯನ್ ಖಾನ್ ಸೇರಿ ಮೂವರು ಆರೋಪಿಗಳ ಎನ್ಸಿಬಿ ಕಸ್ಟಡಿ ಇವತ್ತು ಅಂತ್ಯ ಆಗಲಿದೆ. ಈಗಾಗಲೇ ಜಾಮೀನು ಕೋರಿ ಆರ್ಯನ್ ಖಾನ್ ಅರ್ಜಿ ಸಲ್ಲಿಸಿದ್ದಾನೆ. ಇದನ್ನೂ ಓದಿ: ಎನ್ಸಿಬಿ ಅಧಿಕಾರಿಗಳ ಮುಂದೆ ವಿಜ್ಞಾನ ಪುಸ್ತಕಕ್ಕೆ ಬೇಡಿಕೆಯಿಟ್ಟ ಆರ್ಯನ್!