ಮುಂಬೈ: ಡ್ರಗ್ಸ್ ಪ್ರಕರಣ ಸಂಬಂಧ ಅರೆಸ್ಟ್ ಆಗಿರುವ ಬಾಲಿವುಡ್ ಕಿಂಗ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಜಾಮೀನು ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಆರ್ಯನ್ ಜೈಲಿನಲ್ಲಿಯೇ ಬಂಧಿಯಾಗಿದ್ದು, ಇದೀಗ ರಾಮ ಹಾಗೂ ಸೀತೆಯ ಮೊರೆ ಹೋಗಿದ್ದಾನೆ.
ಸದ್ಯ ಆರ್ಯನ್ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದು, ಧಾರ್ಮಿಕ ಪುಸ್ತಕಗಳನ್ನು ತರಿಸಿ ಓದುತ್ತಿದ್ದಾನೆ. ರಾಮ, ಸೀತೆಯ ಪುಸ್ತಕ ಓದುತ್ತಿರುವುದಾಗಿ ಜೈಲಿನ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಜಾಮೀನು ನಿರಾಕರಣೆಗೊಂಡ ಬಳಿಕದಿಂದ ಆರ್ಯನ್ ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆ. ಹೀಗಾಗಿ ಆತನಿಗೆ ಕೆಲವೊಂದು ಪುಸ್ತಕಗಳನ್ನು ಓದಲು ಸಲಹೆ ನೀಡಿರುವುದಾಗಿ ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜೈಲಿನಲ್ಲಿರುವ ಗ್ರಂಥಾಲಯದಿಂದ ಕೈದಿಗಳು ಕೇಳಿದ ಪುಸ್ತಕಗಳನ್ನು ನೀಡಲಾಗುತ್ತದೆ. ಇಲ್ಲಿ ಆರ್ಯನ್ ತಮಗೆ ರಾಮ ಹಾಗೂ ಸೀತೆಯ ಪುಸ್ತಕವನ್ನು ನೀಡುವಂತೆ ಕೇಳಿದ್ದರಿಂದ ಅದನ್ನೇ ತರಿಸಿ ಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಕೇಸ್ – ಶಾರೂಖ್ ನಿವಾಸದ ಮೇಲೆ ಎನ್ಸಿಬಿ ದಾಳಿ
ಜೈಲಿನ ಲೈಬ್ರೆರಿಯಲ್ಲಿ ಕೇವಲ ಧಾರ್ಮಿಕ ಪುಸ್ತಕಗಳು ಮಾತ್ರವಲ್ಲದೇ ಕೆಲವೊಂದು ಸ್ಫೂರ್ತಿದಾಯವಾಗಿರುವ ಪುಸ್ತಕಗಳು ಕೂಡ ಇವೆ. ಯಾವುದೇ ಕೈದಿ ಮನೆಯಿಂದಲೂ ಪುಸ್ತಕಗಳನ್ನು ತರಿಸಿ ಓದಬಹುದು. ಆದರೆ ಧಾರ್ಮಿಕ ಮತ್ತು ಸ್ಫೂರ್ತಿದಾಯಕ ಪುಸ್ತಕಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಇದನ್ನೂ ಓದಿ: ಮೊದಲ ಬಾರಿಗೆ ಮಗನನ್ನು ಭೇಟಿಯಾದ ಶಾರೂಖ್
ಕಳೆದ ಗುರುವಾರವಷ್ಟೇ ನಟ ಶಾರೂಖ್ ಕಾನ್ ಅವರು ತಮ್ಮ ಪುತ್ರನನ್ನು ಭೇಟಿಯಾಗಲೆಂದು ಜೈಲಿಗೆ ತೆರಳಿದ್ದರು. ಈ ವೇಳೆ ಅವರು ಪುತ್ರನ ಜೊತೆ 18 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದು, ತಂದೆಯ ಮುಂದೆ ಆರ್ಯನ್ ಭಾವುಕನಾಗಿದ್ದನು ಎಂಬುದಾಗಿ ತಿಳಿದುಬಂದಿತ್ತು.