ಮುಂಬೈ: ಟೀಂ ಇಂಡಿಯಾ ಕ್ರಿಕೆಟರ್ ಹಾಗೂ ಮುಂಬೈ ತಂಡದ ಆಲ್ರೌಂಡರ್ ಅಭಿಷೇಕ್ ನಾಯರ್ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
36 ವರ್ಷದ ಅಭಿಷೇಕ್ ನಾಯರ್ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ 2009ರಲ್ಲಿ ಭಾರತದ ಪರ ಮೂರು ಏಕದಿನ ಪಂದ್ಯಗಳನ್ನು ಆಡಿದ್ದರು. ಆದರೆ ಈ ಸಮಯದಲ್ಲಿ ಅವರು ಕೇವಲ ಒಂದು ಇನ್ನಿಂಗ್ಸ್ ಆಡಲು ಸಾಧ್ಯವಾಯಿತು ಮತ್ತು ಅದರಲ್ಲಿ ಯಾವುದೇ ರನ್ ಗಳಿಸಲಿಲ್ಲ. ಬೌಲರ್ ಆಗಿದ್ದರೂ ಅವರಿಗೆ ಅಂತರಾಷ್ಟ್ರೀಯ ಕ್ರಿಕೆಟ್ ವಿಕೆಟ್ಗಳ ದಾಖಲೆ ಇಲ್ಲ. ಆದಾಗ್ಯೂ ದೇಶೀಯ ಕ್ರಿಕೆಟ್ನಲ್ಲಿ ಮುಂಬೈನ ಅತ್ಯಂತ ಯಶಸ್ವಿ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಪ್ರಸ್ತುತ ಅಭಿಷೇಕ್ ನಿರೂಪಕರಾಗಿ ಸಕ್ರಿಯರಾಗಿದ್ದಾರೆ.
ನಿವೃತ್ತಿ ಘೋಷಿಸಿದ ಅಭಿಷೇಕ್, ವೃತ್ತಿ ಜೀವನದಲ್ಲಿ ನಾನು ಸಂಪೂರ್ಣವಾಗಿ ತೃಪ್ತಿ ಹೊಂದಿದ್ದೇನೆ. ಇಷ್ಟು ದಿನ ಕ್ರಿಕೆಟ್ ಆಡಲು ಸಾಧ್ಯವಾಯಿತು. ನಾನು ಅದೃಷ್ಟಶಾಲಿ, ನನಗೆ ಯಾವುದೇ ರೀತಿಯ ಪಶ್ಚಾತ್ತಾಪವಿಲ್ಲ ಎಂದು ಹೇಳಿದ್ದಾರೆ.
ಅಭಿಷೇಕ್ ಇತ್ತೀಚೆಗೆ ವೆಸ್ಟ್ ಇಂಡೀಸ್ನಲ್ಲಿ ನಡೆದ ಕೆರಿಬಿಯನ್ ಕ್ರಿಕೆಟ್ ಲೀಗ್ನಲ್ಲಿ ತಂಡದ ತರಬೇತುದಾರರಾಗಿದ್ದರು. ಅಭಿಷೇಕ್ ನಾಯರ್ ನಿವೃತ್ತಿಯ ಬಗ್ಗೆ ಬಿಸಿಸಿಐ ಮತ್ತು ಮುಂಬೈ ಕ್ರಿಕೆಟ್ ಸಂಘಕ್ಕೆ ಇತ್ತೀಚೆಗೆ ಪತ್ರ ಬರೆದಿದ್ದರು.
ಅಭಿಷೇಕ್ ಒಟ್ಟು 103 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. 5,749 ರನ್ ಗಳಿಸಿದ ಅವರು 173 ವಿಕೆಟ್ ಪಡೆದಿದ್ದಾರೆ. ದೇಶಿಯ ಕ್ರಿಕೆಟ್ನಲ್ಲಿ ಅವರು 13 ಶತಕಗಳನ್ನು ಮತ್ತು 32 ಅರ್ಧಶತಕಗಳನ್ನು ಹೊಂದಿದ್ದಾರೆ. ಅವರ ಗರಿಷ್ಠ ಸ್ಕೋರ್ 259 ಆಗಿದ್ದು, ಆರು ಇನ್ನಿಂಗ್ಸ್ ಗಳಲ್ಲಿ ಐದು ವಿಕೆಟ್ಗಳನ್ನು ಪಡೆದಿದ್ದಾರೆ. ಕಳೆದ ವರ್ಷ ಜುಲೈನಿಂದ ಅಭಿಷೇಕ್ ಕೋಲ್ಕತ್ತಾ ನೈಟ್ ರೈಡರ್ ಕ್ರಿಕೆಟ್ ತಂಡದ ಸಹಾಯಕ ಕೋಚ್ ಮತ್ತು ಮಾರ್ಗದರ್ಶಕರಾಗಿದ್ದರು. ಬ್ರೆಂಡನ್ ಮೆಕಲಮ್ ಈ ತಂಡದ ಮುಖ್ಯ ಕೋಚ್ ಆಗಿದ್ದರು. ಶ್ರೇಯಸ್ ಅಯ್ಯರ್ ಅವರ ಬ್ಯಾಟಿಂಗ್ನಲ್ಲಿ ಅಭಿಷೇಕ್ ಪ್ರಮುಖ ಪಾತ್ರ ವಹಿಸಿದ್ದರು.